ನವದೆಹಲಿ: ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಜೆರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿರುವ ಹಾಕಿ ಇಂಡಿಯಾ ನಿರ್ಧಾರವನ್ನು ವಯನಾಡ್ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಖಂಡಿಸಿದ್ದಾರೆ.
ದೇಶದ ಇತಿಹಾಸ ಮತ್ತು ಪರಂಪರೆಯನ್ನು ಬದಲಾಯಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಇದೂ ಒಂದು ಎಂದು ಅವರು ಆರೋಪಿಸಿದ್ದಾರೆ.
ಮುಂಗಾರು ಅಧಿವೇಶನದ ಆಗಮಿಸಿದ ವೇಳೆ ಸಂಸತ್ತಿನ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ತಂಡದ ಸಮವಸ್ತ್ರವನ್ನೇ ಬದಲಾಯಿಸಲಿ ಅಥವಾ ಶಿಕ್ಷಣ ನೀತಿಯ ಮೂಲಕ ಇತಿಹಾಸವನ್ನೇ ತಿರುಚಲು ಯತ್ನಿಸಲಿ. ದೇಶದ ಯುವಜನತೆ ಈ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂಬುದನ್ನು ನೀವು ನೋಡಿದ್ದೀರಿ. ಜಂತರ್ ಮಂತರ್ನಲ್ಲಿ ನೆರೆದಿದ್ದ ಯುವಕರು ಆಡಿದ ಮಾತುಗಳನ್ನು ಕೇಳಿದ್ದೀರಿ. ಅದೇ ಈ ದೇಶದ ನಿಜವಾದ ಧ್ವನಿ” ಎಂದು ಹೇಳಿದರು.
ಈ ದೇಶದ ಸ್ವಾತಂತ್ರ್ಯ ಸಂಗ್ರಾಮವು ಅಹಿಂಸೆ ಮತ್ತು ಸತ್ಯದ ತತ್ವಗಳ ಮೇಲೆ ರೂಪುಗೊಂಡಿತ್ತು. ಇದರಲ್ಲಿ ಆರ್ಎಸ್ಎಸ್ (RSS) ಯಾವುದೇ ಪಾತ್ರವಹಿಸಿಲ್ಲ. ಇಡೀ ದೇಶಕ್ಕೆ ಈ ವಾಸ್ತವ ತಿಳಿದಿದೆ. ಅರಿಯದವರಿಗೂ ಈಗ ಅವರ ನಿಜವಾದ ಉದ್ದೇಶ ಏನೆಂಬುದು ಅರ್ಥವಾಗುತ್ತಿದೆ. ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಾರ್ಟಿ ಆ ಹೋರಾಟದ ನೇತೃತ್ವ ವಹಿಸಿತ್ತು. ಈ ದೇಶದ ಆತ್ಮವು ಅಹಿಂಸೆ, ಸತ್ಯ ಮತ್ತು ಸಹೋದರತ್ವದಲ್ಲಿ ಅಡಗಿದೆ. ಅದನ್ನು ಆರ್ಎಸ್ಎಸ್ ಆಗಲಿ ಅಥವಾ ಬೇರಾರೇ ಆಗಲಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅವರು ಎಷ್ಟೇ ವಿಭಜನೆ ಉಂಟುಮಾಡಿದರೂ, ಹಿಂಸಾಚಾರವನ್ನು ಪ್ರಚೋದಿಸಿದರೂ ಅಥವಾ ದ್ವೇಷವನ್ನು ಹರಡಿದರೂ, ಸಹೋದರತ್ವ, ಪರಸ್ಪರ ಪ್ರೀತಿ ಮತ್ತು ಏಕತೆಯಿಂದ ಕೂಡಿರುವ ಈ ದೇಶದ ಆತ್ಮವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಹೇಳಿದರು.
Laxmi News 24×7