ಬೆಳಗಾವಿ : ಸ್ಪೋರ್ಟ್ಸ್ ಕ್ಲಬ್ ಹೆಸರಿನಲ್ಲಿ ನಡೆಸುತ್ತಿರುವ ಬಾರ್ನಿಂದ ತಮ್ಮೂರ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿದೆ. ಯುವಕರು ಜೀವನ ಕಳೆದುಕೊಳ್ಳುತ್ತಿದ್ದು, ಕೂಡಲೇ ಬಂದ್ ಮಾಡಿ ಎಂದು ಆಗ್ರಹಿಸಿ ಚನ್ನಮ್ಮನ ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮಸ್ಥರು ಸೋಮವಾರ ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಬಹುಜನ ಚಳುವಳಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡು, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಇಲಾಖೆಗೆ ಏಳು ದಿನಗಳ ಗಡುವು ನೀಡಿದರು. ಗಡವಿನೊಳಗೆ ಬಂದ್ ಮಾಡಿಸದೇ ಹೋದಲ್ಲಿ ಗ್ರಾಮದ ಮಹಿಳೆಯರು, ವಿದ್ಯಾರ್ಥಿಗಳು ಸೇರಿ ಈ ಬಾರ್ ಮುಂದೆಯೇ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖೋದಾನಪುರ ಗ್ರಾಮದ ಜಮನೂರ ಮಾರ್ಗವಾಗಿ ಕಿತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಶ್ರೀ ಸಾಯಿ ಸ್ಪೋರ್ಟ್ಸ್ ಕ್ಲಬ್ ಹೆಸರಿನಲ್ಲಿ ಬಾರ್ ನಡೆಸುತ್ತಿದ್ದಾರೆ. ಇದರಿಂದ ಯುವಕರು ಹಾಳಾಗುತ್ತಿದ್ದು, 25ರಿಂದ 35ರ ವಯಸ್ಸಿನ ಯುವಕರು ಅತಿಯಾದ ಮದ್ಯ ಸೇವಿಸಿ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಜೀವನ ಕಳೆದುಕೊಂಡಿದ್ದಾರೆ. ಇದರಿಂದ ಸಾಕಷ್ಟು ಮನೆತನಗಳು ಹಾಳಾಗಿವೆ. ಈ ಮಾರ್ಗದಲ್ಲಿ ನಡೆದುಕೊಂಡು ಬರುವ ಹೆಣ್ಣು ಮಕ್ಕಳು ಶಾಲಾ ವಿದ್ಯಾರ್ಥಿಗಳಿಗೆ, ಜಮೀನುಗಳಿಗೆ ಹೋಗಿ ಬರುವ ಮಹಿಳೆಯರಿಗೂ ಕುಡುಕರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಸುತ್ತಮುತ್ತಲಿನ ಜಮೀನುಗಳಲ್ಲಿ ಮದ್ಯದ ಬಾಟಲಿಗಳನ್ನು ಎಸೆಯುತ್ತಿದ್ದು, ಉಳುಮೆ ಮಾಡುವುದೇ ಕಷ್ಟವಾಗಿದೆ. ಆದ್ದರಿಂದ ಗ್ರಾಮದ ಹಿತದೃಷ್ಟಿಯಿಂದ ಈ ಬಾರ್ ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಸೋಮು ಬಡ್ಲಿ, ಕರೆಪ್ಪ ಉಡಿಕೇರಿ, ಮಹಾಂತೇಶ ಗೌಡರ, ಗೀತಾ ಪೂಜಾರ, ಮಹಾದೇವಿ ಮರೇರ, ನಿರ್ಮಲಾ ನೇಗಿನಾಳಮಠ, ಶಿವಕ್ಕ ಮಿಲಕಿ, ನೀಲವ್ವ ಬೋಗುರಮಠ ಇತತರಿದ್ದರು.
Laxmi News 24×7