ಬೆಂಗಳೂರು: ಕುಡಿಯುವ ನೀರಿಗಾಗಿ 224 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಸಿಎಂ ಅಧ್ಯಕ್ಷತೆಯಲ್ಲಿ, ವಿಭಾಗೀಯ ಮಟ್ಟದ ಪ್ರಕೃತಿ ವಿಕೋಪದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಈ ಹಿಂದೆ ಕುಡಿಯುವ ನೀರಿಗಾಗಿ 117 ಕೋಟಿ ರೂ. ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಈ ಬಾರಿ 224 ಕ್ಷೇತ್ರಕ್ಕೆ 224 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ನೀರಿಗಾಗಿ ನಮ್ಮಲ್ಲಿ ಹಣಕಾಸು ಕೊರತೆ ಇಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ನೀರು ಸಿಗದಿದ್ರೆ, ಖಾಸಗಿ ಕೊಳವೆ, ಬಾವಿ ಮೂಲಕ ನೀರು ಕೊಡಬೇಕು. ಸಿಗದಿದ್ರೆ ಹೊಸದಾಗಿ ಬೋರ್ ಕೊರೆಸಿ ನೀರು ಕೊಡಬೇಕು. ರೈತರ ಹೊಲ, ಗದ್ದೆಗಳಿಗೆ ಭೇಟಿ ನೀಡಿದ್ದೆವು. ಅನೇಕ ಬೆಳೆ ಹಾಳಾಗಿದ್ದು, ನೀರಿನ ಸಮಸ್ಯೆ ಇರೋದು ಕಂಡುಬಂದಿದೆ. ಹೀಗಾಗಿ ಮೊದಲು ಬರದ ಬಗ್ಗೆ ಆದ್ಯತೆ ಕೊಡಲಾಗಿದೆ. ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಧೈರ್ಯ ಕೊಡ್ತಿದ್ದೇವೆ. ಹೆಚ್ಚು ಅನುದಾನ ಕೊಟ್ಟಿದ್ದೇವೆ. ಅಲ್ಲದೇ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗ್ತಿದ್ದೇನೆ ಎಂದು ತಿಳಿಸಿದ್ದಾರೆ.
15ನೇ ಹಣಕಾಸು ಹಣ ಬಿಡುಗಡೆಗೆ ಮನವಿ:
ಇನ್ನೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ 2,186 ಕೋಟಿ ರೂ. ಹಣ ಬಿಡುಗಡೆ ಆಗಬೇಕು. 5,900 ಗ್ರಾಮ ಪಂಚಾಯತಿಗಳಿಗೆ ಹಣಕಾಸು ಕೊರತೆಯಾಗಿದೆ. ಈ ಸಂಬಂಧ ಅಲೋಕೇಟ್ ಆಗಲಿದೆ. ಪಂಚಾಯತಿ ವಿದ್ಯುತ್ ದುರಸ್ತಿ ಕೂಡ ಆಗಬೇಕಿದೆ. ಇ-ಸ್ವರಾಜ್ ತಂತ್ರಾಂಶ ಇದೆ. ವರ್ಗಾವಣೆ ಪ್ರಮಾಣಪತ್ರ ಆಗಬೇಕಿದೆ. 15ನೇ ಹಣಕಾಸು ಬರಬೇಕಾದ ಹಣವನ್ನು ತಡೆ ಹಿಡಿಯಲಾಗಿದೆ. ಈಗಾಗಲೇ ಅನೇಕ ಸಚಿವರನ್ನ ಭೇಟಿಯಾಗಿದ್ದು, ಇಂದು ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಹಣ ಬಿಡುಗಡೆ ಮಾಡಿಸುವಂತೆ ಮನವಿ ಮಾಡ್ತೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ಅವರಿಗೆ ಅಧಿಕಾರಕ್ಕೆ ಬರುವ ಹಪಹಪಿ:
ಬಿಜೆಪಿಯವರಿಂದು ಬರ ಅಧ್ಯಯನ ಮಾಡುತ್ತಿರುವ ವಿಚಾರವಾಗಿ ಮಾತನಾಡಿ, ಬಿಜೆಪಿ ಅವರಿಗೆ ಬರ, ಶಿಕ್ಷಣ, ಯುವಕರ ಬಗ್ಗೆ ಚಿಂತನೆ ಇಲ್ಲ. ಅಧಿಕಾರಕ್ಕೆ ಬರುವ ಹಪಹಪಿ ಇದೆ. ಬಿಜೆಪಿ ಅವರು ಕೇಂದ್ರಕ್ಕೆ ಹೋಗಿ ಅನುದಾನ ತರಲಿ. ಮಹದಾಯಿ ಯೋಜನೆ, ಕಳಸ ಬಂಡೂರಿ ತಿರಸ್ಕಾರ ಮಾಡಿದ್ದಾರೆ. ಯೋಜನೆ ನೆನೆಗುದಿಗೆ ಬಿದ್ದಿರೋದು ಬಿಜೆಪಿಗೆ ಕಾಣ್ತಿಲ್ವಾ? ಇವರಿಗೆ ರಾಜ್ಯದ ಬಗ್ಗೆ ಕಾಳಜಿ ಇದೆಯಾ? ಮೊದಲು ಬಿಜೆಪಿ ಅವರು ಅದರ ಬಗ್ಗೆ ಮಾತಾಡಲಿ. ಕಾಟಾಚಾರಕ್ಕೆ ಬರ ಅಧ್ಯಯನ ಹೋಗೋದಲ್ಲ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮತ್ತೆ ರಾಜಕೀಯವಾಗಿ ಸ್ಪರ್ಧೆ ಮಾಡಬೇಕು:
ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿ, ಅವರು ಮತ್ತೆ ರಾಜಕೀಯವಾಗಿ ಸ್ಪರ್ಧೆ ಮಾಡಬೇಕು. ಅವರು ಮತ್ತೆ ನಮಗೆ ಮಾರ್ಗದರ್ಶನ ಮಾಡಬೇಕು. ಸಿದ್ದರಾಮಯ್ಯ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದಾರೆ.
Laxmi News 24×7