ಬೆಂಗಳೂರು : ಬಿಜೆಪಿ ಅವರಿಗೆ ನನ್ನ ಪರಿಶುದ್ದ ಆಡಳಿತ ಸಹಿಸೋಕೆ ಆಗ್ತಿಲ್ಲ. ಹೀಗಾಗಿ ನನ್ನ ಮೇಲೆ ಏನೇನೋ ಮಾತಾಡ್ತಾ ಇದ್ದಾರೆ ಅಂತ ಸಿಎಂ ಡಿಕೆಶಿವಕುಮಾರ್ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೊತ್ವಾಲ್ ಆಡಳಿತ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಖುಷಿಗೆ ಏನು ಬೇಕಾದರೂ ಮಾತನಾಡಲಿ. ನಾನು ಹಳ್ಳಿಯಲ್ಲಿ ಹುಟ್ಟಿದ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದವನು. ಅಲ್ಲಿಂದ ಇಲ್ಲಿವರೆಗೂ ಜನರ ಬೆಂಬಲದಿಂದ ಬೆಳೆದಿದ್ದೇನೆ. ನಾನು ಎಷ್ಟು ಪರಿಶುದ್ಧ ರಾಜಕೀಯ ಮತ್ತು ಆಡಳಿತ ಮಾಡುತ್ತಿದ್ದೇನೆ ಎಂಬುದನ್ನು ಜನರು ನೋಡುತ್ತಿದ್ದಾರೆ. ಅದನ್ನೇ ಬಿಜೆಪಿ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ರಾಜ್ಯದ ಸಿಎಸ್ಆರ್ ನಿಧಿಯ ಬಳಕೆ ಕುರಿತು ಮಾತನಾಡಿ, ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿ ರೂ. ಸಿಎಸ್ಆರ್ ನಿಧಿ ಇದ್ದು, ಅದರ ಪ್ರತಿಯೊಂದು ರೂಪಾಯಿಯೂ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ಬಳಸಬೇಕು ಎಂದು ಕರೆ ನೀಡಿದರು.
ಸರ್ಕಾರ ಈಗಾಗಲೇ ಸಿಎಸ್ಆರ್ ನಿಧಿಯನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸುವ ಬಗ್ಗೆ ತೀರ್ಮಾನಿಸಿದೆ. ಆದರೆ ಸುಮಾರು 50% ಉದ್ಯಮಿಗಳು ಸಿಎಸ್ಆರ್ ನಿಧಿಯನ್ನು ಸರಿಯಾಗಿ ಬಳಸುತ್ತಿಲ್ಲ ಎಂದು ಹೇಳಿದ ಅವರು, ಇದರ ಪರಿಶೀಲನೆಗಾಗಿ ವಿಶೇಷ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದರು.
ಗ್ರಾಮೀಣ ಮಕ್ಕಳಿಗೂ ನಗರ ಮಕ್ಕಳಂತೆಯೇ ಗುಣಮಟ್ಟದ ಶಿಕ್ಷಣ ಸಿಗಬೇಕು. ಅದಕ್ಕಾಗಿ ರಾಜ್ಯದ 2 ಸಾವಿರ ಜಾಗಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಶಾಲೆ ನಿರ್ಮಿಸಬಹುದು ಎಂದು ಆಹ್ವಾನ ನೀಡಿದರು. ಹಣವನ್ನು ಸರ್ಕಾರಕ್ಕೆ ನೀಡುವ ಬದಲು, ಕಂಪನಿಗಳೇ ಶಾಲೆ ಕಟ್ಟಬಹುದು ಮತ್ತು ತಮ್ಮ ಸಂಸ್ಥೆಯ ಹೆಸರನ್ನೂ ಇಡಬಹುದು ಎಂದರು.
ನಗರದ ಹೆಚ್ಚಿನ ಶುಲ್ಕ ಪಡೆಯುವ ಖಾಸಗಿ ಶಾಲೆಗಳು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು. ದತ್ತು ಪಡೆಯದಿದ್ದರೆ ಅವರ ಶುಲ್ಕಕ್ಕೆ ಮಿತಿ ಹಾಕುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದರು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಖಾಸಗಿ ಶಾಲೆಗಳು ಶಿಕ್ಷಕರನ್ನು ಒದಗಿಸಬಹುದು ಎಂದು ತಿಳಿಸಿದರು. ಸದ್ಯದಲ್ಲೇ ಉದ್ಯಮಿಗಳ ಜೊತೆ ಸಭೆ ನಡೆಸಿ ಸಿಎಸ್ಆರ್ ನಿಧಿ ಬಳಕೆಗೆ ಹೊಸ ನೀತಿ ರೂಪಿಸಲಾಗುವುದು ಎಂದು ಹೇಳಿದರು.
Laxmi News 24×7