ಕೊಪ್ಪಳ: ಬಲ್ಡೋಟಾ ಕಾರ್ಖಾನೆಗೆ ನುಗ್ಗಲು ಯತ್ನದ ಆರೋಪದ ಮೇಲೆ ರೈತ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಿದೆ.
ಕೊಪ್ಪಳ ತಾಲೂಕಿನ ಬಸಾಪೂರ ಬಳಿ ಇರುವ ಬಲ್ಡೋಟಾ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಕಾರ್ಖಾನೆ ಮುಂಭಾಗ ಮಂಗಳವಾರ (ಜು.22) 46ನೇ ರೈತ ಹುತಾತ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಂತಿಯುತವಾಗಿ ಮುಕ್ತಾಯಗೊಳ್ಳಬೇಕಿದ್ದ ಕಾರ್ಯಕ್ರಮ, ಕೊನೆಗೆ ಕ್ರಾಂತಿಕಾರಿ ಸ್ವರೂಪ ಪಡೆದುಕೊಂಡಿತು. ಈ ವೇಳೆ ಬಲ್ಡೋಟಾ ಕಾರ್ಖಾನೆಗೆ ನುಗ್ಗಲು ಯತ್ನದ ಆರೋಪದಡಿ ಅಲ್ಲಮಪ್ರಭು ಬೆಟ್ಟದೂರು ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ರೈತ ಮುಖಂಡರಾದ, ಅಲ್ಲಮಪ್ರಬು ಬೆಟ್ಟದೂರು, ಬಸಾಪೂರ ನಿವಾಸಿ ಯಮನೂರಪ್ಪ ಹಾಲಳ್ಳಿ, ಮೂಕಪ್ಪ ಎನ್. ಮೇಸ್ತ್ರಿ, ಭೀಮಸೇನ ಕಲಿಕೇರಿ, ಮಲ್ಲಿಕಾರ್ಜುನ ಗೋನಾಳ, ಮಂಗಳೇಶ ರಾಠೋಡ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ರಾಜ್ಯ ರೈತ ಸಂಘದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಲ್ಡೋಟಾ ಕಾರ್ಖಾನೆ ಆವರಣದೊಳಗಿರುವ ಸುಮಾರು 44 ಎಕರೆ ವಿಸ್ತೀರ್ಣದ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ರೈತರು ನಿರಂತರ ಹೋರಾಟ ನಡೆಸುತ್ತಿದ್ದರು. ಇಷ್ಟು ದಿನ ಕೆರೆ ಮುಕ್ತ ಮಾಡದ್ದಕ್ಕೆ ಆಕ್ರೋಶದಲ್ಲಿದ್ದ ರೈತ ಯಮನೂರಪ್ಪ ಎಂಬುವವರು ನೇರವಾಗಿ ಕೆರೆಗೆ ಧುಮುಕಿ ತಮ್ಮ ಆಕ್ರೋಶ ಹೊರಹಾಕಿದ್ರು.
Laxmi News 24×7