ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಖಾಸಗಿ ಫೈನಾನ್ಸ್ ಕರ್ಮಕಾಂಡ ಹೊರಬಿದ್ದಿದೆ. ಇಲ್ಲಿನ ಟಿಳಕವಾಡಿಯಲ್ಲಿರುವ ಅಪೇಕ್ಸ್ ಬಿಜ್ ಕಾರ್ಫ್ ಎಲ್ಎಲ್ಪಿ ಎಂಬ ಖಾಸಗಿ ಫೈನಾನ್ಸ್ 165 ಕೋಟಿ ರೂ. ವಂಚಿಸಿರುವ ಆರೋಪವಿದ್ದು, ಹೂಡಿಕೆದಾರರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ (ಜು.13) ಪ್ರತಿಭಟನೆ ನಡೆಸಿದ ಹೂಡಿಕೆದಾರರು ನ್ಯಾಯ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 4% ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಸುಮಾರು 3500ಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹ ಮಾಡಿ, 165 ಕೋಟಿ ರೂ. ವಂಚಸಿರುವುದಾಗಿ ಹೂಡಿಕೆದಾರರು ಆರೋಪಿಸಿದ್ದಾರೆ. ಜೊತೆಗೆ ಕಂಪನಿಯ ಮಾಲೀಕರಾದ ಕಾಶೀನಾಥ ವಾಗ್ಮೂರೆ ಮತ್ತು ಗಣೇಶ್ ಭಂಡಾರಿ ಅವರು ಹಣ ಸಂಗ್ರಹಿಸಿಕೊಂಡು ದುಬೈಗೆ ಓಡಿಹೋಗಿದ್ದಾರೆ ಎಂದು ದೂರಿದ್ದಾರೆ.
ಮಾಲೀಕರು ದುಬೈಗೆ ಓಡಿ ಹೋಗಿದ್ದು. ನಮಗೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಎಲ್ಲೋ ಕುಳಿತು ಕೇವಲ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ನಮ್ಮ ದುಡ್ಡು ನಮಗೆ ಕೊಡಿಸಿ. ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯ ಟಿಳಕವಾಡಿಯಲ್ಲಿರುವ ಖಾಸಗಿ ಫೈನಾನ್ಸ್ ಕಂಪನಿಯು ಜಿಲ್ಲಾಡಳಿತದ ಬಿಗಿ ಕ್ರಮದ ಮಧ್ಯೆಯೂ ಇಷ್ಟೊಂದು ಪ್ರಮಾಣದ ಹಣ ಹೂಡಿಕೆ ಮಾಡಿಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Laxmi News 24×7