ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಅತ್ಯಂತ ಚಾಣಾಕ್ಷತನದಿಂದ ಜೈಲಿನ ಗೋಡೆ ಹಾರಿ ಪರಾರಿಯಾಗಿರುವ ದೃಶ್ಯಗಳು ಈಗ ಲಭ್ಯವಾಗಿವೆ.
ಸಜಾ ಕೈದಿಗಳಾಗಿದ್ದ ಬೀದರ್ ಜಿಲ್ಲೆ ಮೂಲದ ಮಸ್ತಾನ್, ಸಂತೋಷ್ ಹಾಗೂ ಸಾಗರ್ ಜೈಲಿನಿಂದ ತಪ್ಪಿಸಿಕೊಳ್ಳಲು ದಿನಗಳ ಹಿಂದೆಯೇ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿದೆ
ಸಿಸಿ ಟಿವಿ ದೃಶ್ಯದಲ್ಲಿ ಏನಿದೆ?
ಮಧ್ಯರಾತ್ರಿ ಜೈಲಿನ ಕತ್ತಲನ್ನು ಬಳಸಿಕೊಂಡ ಕೈದಿಗಳು ಮೊದಲು ತಾವು ಉಳಿದುಕೊಂಡಿದ್ದ ಬ್ಯಾರಕ್ನ ಕಿಟಕಿಯ ಕಬ್ಬಿಣದ ರಾಡ್ಗಳನ್ನು ಮುರಿದು ಹೊರಬಂದಿದ್ದಾರೆ.
ಜೈಲಿನ ಆವರಣಕ್ಕೆ ಬಂದ ತಕ್ಷಣವೇ ಅಲ್ಲಿದ್ದ ಏಣಿಯೊಂದರ ಸಹಾಯದಿಂದ ಜೈಲಿನ ಎತ್ತರದ ಗೋಡೆಯನ್ನು ಹತ್ತಿದ್ದಾರೆ. ಗೋಡೆ ಹತ್ತಿದ ಬಳಿಕ ತಾವು ಧರಿಸಿದ್ದ ಮತ್ತು ಬಳಸುತ್ತಿದ್ದ ಬಟ್ಟೆಗಳನ್ನೇ ಒಟ್ಟಿಗೆ ಸೇರಿಸಿ ಉದ್ದನೆಯ ಹಗ್ಗದಂತೆ ಮಾಡಿಕೊಂಡಿದ್ದಾರೆ. ಆ ಬಟ್ಟೆಯ ಹಗ್ಗದ ಸಹಾಯದಿಂದ ಜೈಲಿನ ಮುಖ್ಯ ಕಂಪೌಂಡ್ನಿಂದ ಕೆಳಗೆ ಜಿಗಿದು ಕತ್ತಲಲ್ಲಿ ಮಾಯವಾಗಿದ್ದಾರೆ.
ಕೈದಿಗಳು ಕಿಟಕಿಯ ರಾಡ್ ಮುರಿದಿರುವ ಜಾಗ ಹಾಗೂ ಅವರು ಜೈಲಿನ ಗೋಡೆ ಹಾರಿ ಓಡಿಹೋಗುತ್ತಿರುವ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ನಿರ್ಲಕ್ಷ್ಯ ಬಯಲಿಗೆ:
ಕೈದಿಗಳ ಈ ಜೈಲ್ ಬ್ರೇಕ್ ಪ್ರಕರಣದ ಬೆನ್ನಲ್ಲೇ ಕಲಬುರಗಿ (Kalaburagi) ಕೇಂದ್ರ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜವಾಬ್ದಾರಿರಹಿತ ವರ್ತನೆ ಮತ್ತು ಮಹಾ ನಿರ್ಲಕ್ಷ್ಯ ಬಯಲಿಗೆ ಬಂದಿದೆ.
ಜೈಲಿನ ಸುರಕ್ಷತೆಯ ದೃಷ್ಟಿಯಿಂದ ಕಂಪೌಂಡ್ ಗೋಡೆಯ ಮೇಲೆ ಹಾಕಲಾಗಿದ್ದ ಸೋಲಾರ್ ತಂತಿಗಳು (Solar Fencing) ಕೆಟ್ಟು ಹೋಗಿ ವರ್ಷಗಳೇ ಕಳೆದಿವೆ. ಈ ಸೋಲಾರ್ ವೈರ್ಗಳಲ್ಲಿ ವಿದ್ಯುತ್ ಪ್ರವಹಿಸುತ್ತಿಲ್ಲ ಎಂಬ ಅತ್ಯಂತ ರಹಸ್ಯ ವಿಷಯ ಜೈಲಿನ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದ್ದರೂ ಸಹ ಅದನ್ನು ದುರಸ್ತಿಪಡಿಸದೆ ವರ್ಷಗಳಿಂದ ಸೈಲೆಂಟ್ ಆಗಿದ್ದರು.
ಜೈಲಾಧಿಕಾರಿಗಳ ಈ ಎಡವಟ್ಟನ್ನು ಸೂಕ್ಷ್ಮವಾಗಿ ಗಮನಿಸಿದ್ದ ಕೈದಿಗಳು, ಸೋಲಾರ್ ತಂತಿಯಿಂದ ತಮಗೆ ಯಾವುದೇ ಅಪಾಯವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡೇ ಕಂಪೌಂಡ್ ಹಾರಿ ತಪ್ಪಿಸಿಕೊಳ್ಳುವ ಬಿಗ್ ಪ್ಲ್ಯಾನ್ ಯಶಸ್ವಿಗೊಳಿಸಿದ್ದಾರೆ.
ಕಾರಾಗೃಹದ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಬಂದೀಖಾನೆಯ ಹಿರಿಯ ಅಧಿಕಾರಿಗಳ ಸರಣಿ ತಪ್ಪುಗಳು ಮತ್ತು ಭದ್ರತಾ ಲೋಪದಿಂದಾಗಿ ಈ ಘಟನೆ ನಡೆದಿದ್ದು, ಸದ್ಯ ಜೈಲು ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
Laxmi News 24×7