ಬೆಂಗಳೂರು: ರಾಜ್ಯದಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಇದೀಗ ರಾಜ್ಯಪಾಲರಿಗೆ ದೂರು ನೀಡಿದೆ.
ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಸಿಟಿ ರವಿ, ಸುಧಾಕರ್ ಮತ್ತಿತರಿದ್ದ ಬಿಜೆಪಿ ನಿಯೋಗವು ಇಂದು (ಜು.15) ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ದೂರಿನಲ್ಲಿ ಪಿಆರ್ಸಿ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಪಿಆರ್ಸಿ ದೇಶದ ಭದ್ರತೆಗೆ ಆತಂಕ ತರಲಿದೆ. ಸರ್ಕಾರದ ಪಿಆರ್ಸಿಗೆ (PRC) ತಡೆಯೊಡ್ಡಲು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನೂ ಪಿಆರ್ಸಿ ಜೊತೆಗೆ ಮತ್ತೆರಡು ಪ್ರಕರಣದ ಬಗ್ಗೆಯೂ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ. ಚಿಕ್ಕಮಗಳೂರಿನಲ್ಲಿ ಬಡವರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ವಂಚನೆ ಪ್ರಕರಣ ಹಾಗೂ ಮಾಲೂರು ತಾಲೂಕು ಅಗ್ಗಲಕೋಟೆ ಗ್ರಾಮದಲ್ಲಿ ಶಾಲಾ ಜಮೀನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣವನ್ನು ಬಿಜೆಪಿ ರಾಜ್ಯಪಾಲರ ಗಮನಕ್ಕೆ ತಂದು ದೂರು ನೀಡಿದೆ. ಇವರೆಡೂ ಪ್ರಕರಣಗಳ ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
ದೂರಿನ ನಂತರ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಅಕ್ರಮವಾಗಿ ಪಿಆರ್ಸಿ ಮಾಡಲು ಸರ್ಕಾರ ಹೊರಟಿದೆ. ಇದನ್ನು ತಡೆಯುವಂತೆ ಕೋರಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ. ಅಕ್ರಮ ನಿವಾಸಿಗಳಿಗೆ, ಕಾಂಗ್ರೆಸ್ಗೆ ವೋಟು ಹಾಕೋರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡುವ ಸಂಚು ನಡೀತಿದೆ. ಸರ್ಕಾರದ ನಡೆ ದೇಶದ ಭದ್ರತೆಗೆ ಅಪಾಯ. ಬಾಂಗ್ಲಾ ವಾಸಿಗಳು 20-30 ಲಕ್ಷ ಜನ ರಾಜ್ಯದಲ್ಲಿ ಇದ್ದಾರೆ. ಇವರನ್ನು ರಾಜ್ಯದ ಶಾಶ್ವತ ನಿವಾಸಿಗಳಾಗಿ ಮಾಡಲು ಸರ್ಕಾರ ಹೊರಟಿದೆ. ಜಿಬಿಎ, ಜಿ.ಪಂ, ತಾ.ಪಂ, ವಿಧಾನಸಭೆ ಚುನಾವಣೆಗೆ ಅಕ್ರಮವಾಗಿ ಪಿಆರ್ಸಿ ಕೊಡಲಾಗ್ತಿದೆ. ಕೂಡಲೇ ಇದನ್ನು ರದ್ದುಪಡಿಸಲು ರಾಜ್ಯಪಾಲರಿಗೆ ಕೋರಿದ್ದೇವೆ. ಪಿಆರ್ಸಿ ಕೊಡೋ ಅಧಿಕಾರ ರಾಜ್ಯಕ್ಕೆ ಇಲ್ಲ, ಕೇಂದ್ರಕ್ಕೆ ಮಾತ್ರ ಇರೋದು. ಸರ್ಕಾರಕ್ಕೆ ಎಚ್ಚರಿಸುವುದಾಗಿ ರಾಜ್ಯಪಾಲರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
Laxmi News 24×7