ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಮುದ್ದೇನಹಳ್ಳಿಯ ಹೋಂಸ್ಟೇನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಸಾಯಿ ಸುರಭಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆಕೆಯ ಸಾವಿಗೆ ಕೆಲ ತಿಂಗಳ ಮೊದಲು ಬರೆದಿದ್ದ ಗ್ರಾಟಿಟ್ಯೂಡ್ ಜರ್ನಲ್ ಇದೀಗ ಬೆಳಕಿಗೆ ಬಂದಿದೆ.
ಜರ್ನಲ್ನಲ್ಲಿ ಸುರಭಿಯ ಮನಸ್ಥಿತಿ, ಹಳೆಯ ಬದುಕಿನಿಂದ ಹೊರಬಂದು ಹೊಸ ಜೀವನ ಕಟ್ಟಿಕೊಳ್ಳುವ ಆಸೆ ಹಾಗೂ ಭವಿಷ್ಯದ ಬಗ್ಗೆ ಹೊಂದಿದ್ದ ನಿರೀಕ್ಷೆಗಳು ವ್ಯಕ್ತವಾಗಿವೆ. 2025ರ ಡಿಸೆಂಬರ್ 30ರಂದು ಬರೆದಿರುವ ಈ ದಿನಚರಿಯಲ್ಲಿ ಸಂಜೀತ್ ಅಲಿ ಜೊತೆಗಿನ ಬ್ರೇಕಪ್ ಬಳಿಕ ತನ್ನ ಬದುಕಿನಲ್ಲಿ ಆಗಿದ್ದ ಬದಲಾವಣೆಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿರುವುದು ಕಂಡುಬಂದಿದೆ. ಜರ್ನಲ್ನಲ್ಲಿ ತಾನು ಇನ್ನೂ ಜೀವಂತವಾಗಿರುವುದಕ್ಕೂ, ಜೀವನದಲ್ಲಿ ಮತ್ತೊಂದು ಅವಕಾಶ ಸಿಕ್ಕಿರುವುದಕ್ಕೂ ದೇವರಿಗೆ ಧನ್ಯವಾದ ಹೇಳಿದ್ದಾಳೆ.
ಜೀವನದಲ್ಲಿ ಎರಡನೇ ಅವಕಾಶ ಸಿಕ್ಕಿದೆ. ನನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತ್ತು ಒಳ್ಳೆಯ ವ್ಯಕ್ತಿಯಾಗಲು ಸಾಧ್ಯವಾಗಿದೆ. ತನ್ನ ತಪ್ಪುಗಳಿಂದ ಪಾಠ ಕಲಿತಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡದಂತೆ ತಡೆಯಲು ಸಾಧ್ಯವಾಗಿದೆ ಎಂದು ಕೂಡ ಉಲ್ಲೇಖಿಸಿದ್ದಾಳೆ.
ಕುಟುಂಬ, ದೇವರು ಮತ್ತು ಉತ್ತಮ ಮೌಲ್ಯಗಳತ್ತ ಮತ್ತಷ್ಟು ಹತ್ತಿರವಾಗಿರುವುದಕ್ಕೂ ಆಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ. ಈ ಮೂಲಕ ಹಳೆಯ ನೋವುಗಳನ್ನು ಮರೆತು ಹೊಸ ಬದುಕು ಆರಂಭಿಸುವ ಪ್ರಯತ್ನದಲ್ಲಿದ್ದಳು ಎಂಬುದು ಜರ್ನಲ್ನಿಂದ ತಿಳಿದುಬರುತ್ತದೆ. ಆದರೆ ಜರ್ನಲ್ನಲ್ಲಿರುವ ಒಂದು ಸಾಲು ಎಲ್ಲರ ಗಮನ ಸೆಳೆದಿದೆ. ನನ್ನ ತಪ್ಪಾದ ಆಯ್ಕೆಯಿಂದ ದೂರವಿಟ್ಟಿದ್ದಕ್ಕೆ ಹಾಗೂ ದುಷ್ಟ ವ್ಯಕ್ತಿಯನ್ನು ಮದುವೆಯಾಗದಂತೆ ತಡೆದಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ ಎಂದು ಸುರಭಿ ಬರೆದಿದ್ದಾಳೆ.
ಈ ಜರ್ನಲ್ ಬೆಳಕಿಗೆ ಬಂದಿರುವುದು ಸುರಭಿ ಸಾವಿನ ತನಿಖೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದ ಯುವತಿಯ ಬದುಕು ಅನುಮಾನಾಸ್ಪದ ಸಾವಿನಲ್ಲಿ ಅಂತ್ಯಗೊಂಡಿರುವುದು ಪ್ರಕರಣದ ಕುರಿತು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.
Laxmi News 24×7