ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಪ್ರಕರಣದ ತನಿಖೆ ನಡೆಸಿದ ಸಿಟಿ ರವಿ ನೇತೃತ್ವದ ಸತ್ಯಶೋಧನಾ ಸಮಿತಿ ಇಂದು (ಜೂ.27) ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ವರದಿ ಸಲ್ಲಿಸಿದೆ.
ಪರಿಷತ್ ಸದಸ್ಯ ಸಿ.ಟಿ ರವಿ, ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಎನ್ ಮಹೇಶ್ ನೇತೃತ್ವದ ತ್ರಿಸದಸ್ಯ ಸಮಿತಿಯು ಆಂತರಿಕ ಸತ್ಯಶೋಧನೆ ನಡೆಸಿ, ಸಾಂದರ್ಭಿಕ ಸಾಕ್ಷಿ, ಶಂಕೆ, ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಹಾಗೂ ಅನುಮಾನ ಇದ್ದ ಶಾಸಕರಿಂದ ಪಡೆದ ಮಾಹಿತಿ ಆಧರಿಸಿ ವರದಿ ಸಿದ್ಧಪಡಿಸಿದ್ದಾರೆ. ಈ ಮಧ್ಯಂತರ ವರದಿಯನ್ನು ಬಿಜೆಪಿ ಕಚೇರಿಯಲ್ಲಿ ಸಲ್ಲಿಕೆ ಮಾಡಿದ್ದು, ಬಳಿಕ ಬಿವೈವಿ ಹಾಗೂ ಸಿಟಿ ರವಿ ಇಬ್ಬರೂ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ.
ನಾಲ್ಕು ದಿನಗಳ ಕಾಲ ಆಂತರಿಕ ತನಿಖೆ ನಡೆಸಿದ ಸಮಿತಿಯು ಒಟ್ಟು ಮೂರು ಪುಟಗಳ ವರದಿಯನ್ನು ಸೀಲ್ಡ್ ಕವರ್ನಲ್ಲಿ ಸಲ್ಲಿಕೆ ಮಾಡಿದೆ. ಮೈತ್ರಿ ಪಕ್ಷಗಳಿಂದ ಒಟ್ಟು 12 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಈ ಪೈಕಿ 1 ಅಸಿಂಧು ಮತ. ಬಿಜೆಪಿಯಿಂದ 1 ಅಸಿಂಧು ಮತ ಸೇರಿ ಒಟ್ಟು 4 ಅಡ್ಡಮತ ಆಗಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಹೊರತಾಗಿ ಉಳಿದ ಅಡ್ಡ ಮತಗಳು ಜೆಡಿಎಸ್ನಿಂದಾಗಿವೆ. ವರದಿಯಲ್ಲಿ ಅಡ್ಡ ಮತ ಚಲಾಯಿಸಿದ ಶಾಸಕರ ಹೆಸರು ಉಲ್ಲೇಖಿಸಿಲ್ಲ ಎನ್ನಲಾಗಿದ್ದು, ಅಡ್ಡ ಮತಗಳ ಸಂಖ್ಯೆ ಮಾತ್ರ ಉಲ್ಲೇಖಿಸಿದ್ದಾರೆ. ಸದ್ಯಕ್ಕೆ ಅನುಮಾನ ಇರುವ ಶಾಸಕರ ಮೇಲೆ ತೀವ್ರ ನಿಗಾ ಇಡುವಂತೆ ಸಮಿತಿ ಶಿಫಾರಸು ಮಾಡಿದೆ.
ಬಳಿಕ ಮಾಧ್ಯಮದವರೊಂದಿಗೆ ಸಿಟಿ ರವಿ ಮಾತನಾಡಿ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಅಡ್ಡ ಮತ ಆಗಿರುವ ಬಗ್ಗೆ ಆಂತರಿಕ ಸತ್ಯ ಶೋಧನೆಗೆ ಮೂರು ಜನರ ಸಮಿತಿ ಮಾಡಿದ್ರು. ಆದಷ್ಟು ಬೇಗ ತನಿಖೆ ನಡೆಸಿ ವರದಿ ಕೊಡಲು ಹೇಳಿದ್ದರು. ಅದರಂತೆ ನಾವು ನಾಲ್ಕು ದಿನಗಳಲ್ಲಿ ವರದಿ ಸಲ್ಲಿಕೆ ಮಾಡಿದ್ದೇವೆ. ಸಮಿತಿಯ ಮೂವರಿಗೂ ಸಹಮತ ಇರುವ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದೇವೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಬೇರೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಆದರೆ ಕಾಂಗ್ರೆಸ್ಗೆ ಪ್ರಶ್ನಿಸುವ ನೈತಿಕತೆ ಇಲ್ಲ. ಇನ್ನುಳಿದಿದ್ದನ್ನ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಕೋರ್ ಕಮಿಟಿಯ ಚರ್ಚೆ ಮೇಲೆ ಮುಂದಿನ ತೀರ್ಮಾನ ಆಗಲಿದೆ. ಅಧ್ಯಕ್ಷರು ಹೇಳಿದ ಕೆಲಸ ಮಾಡಿದ್ದೇವೆ. ಇನ್ನೂ ಅವರು ಹೈಕಮಾಂಡ್ಗೆ ವರದಿಯನ್ನ ಸಲ್ಲಿಕೆ ಮಾಡಬಹುದು ಎಂದು ತಿಳಿಸಿದ್ದಾರೆ.
Laxmi News 24×7