ಬೆಳಗಾವಿ:ಮದುವೆಯಾಗಿ ಕೇವಲ ಒಂದು ತಿಂಗಳಾಗಿದ್ದ ನವವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದ ಮಹಾದ್ವಾರ ರಸ್ತೆಯ ಅಷ್ಟೇಕರ ಗಲ್ಲಿಯಲ್ಲಿ ಬೆಳಕಿಗೆ ಬಂದಿದೆ.
ಖಾಸಗಿ ಕಂಪನಿಯ ಉದ್ಯೋಗಿ ರಕ್ಷಿತಾ ಪೂಜಾರಿ (29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದ ಒಂದು ತಿಂಗಳ ಹಿಂದಷ್ಟೇ ಈಕೆಗೆ ಮಂಜುನಾಥ ಕೃಷ್ಣಾ ಪೂಜಾರಿ ಎಂಬುವರೊಂದಿಗೆ ವಿವಾಹವಾಗಿತ್ತು. ಮೃತ ರಕ್ಷಿತಾ ಮನೆಯಿಂದಲೇ ಖಾಸಗಿ ಕಂಪನಿಯ ಕೆಲಸವನ್ನು (ವರ್ಕ್ ಫ್ರಮ್ ಹೋಮ್) ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಜೂನ್ 9ರಂದು ಬೆಳಿಗ್ಗೆ ರಕ್ಷಿತಾ ತನ್ನ ತಾಯಿಗೆ ದೂರವಾಣಿ ಕರೆ ಮಾಡಿ, ತಾನು ತವರು ಮನೆಗೆ ಬರುವುದಿಲ್ಲ, ಗಂಡನ ಮನೆಯಲ್ಲಿಯೇ ಉಳಿದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ, ಆ ಬಳಿಕ ಸಂಜೆಯವರೆಗೆ ಅವರು ಕುಟುಂಬಸ್ಥರ ಯಾವುದೇ ಕರೆಗಳಿಗೆ ಸಿಗದೆ ಇದ್ದಾಗ ಆತಂಕಗೊಂಡ ಪೋಷಕರು ಮತ್ತು ಸಂಬಂಧಿಕರು ತಕ್ಷಣ ಗಂಡನ ಮನೆಗೆ ಧಾವಿಸಿದ್ದಾರೆ.
ಈ ವೇಳೆ ಮನೆ ಒಳಗಡೆಯಿಂದ ಲಾಕ್ ಆಗಿರುವುದು ಕಂಡುಬಂದಿದೆ. ಸಂಶಯಗೊಂಡು ಕಿಟಕಿಯ ಮೂಲಕ ಇಣುಕಿ ನೋಡಿದಾಗ, ರಕ್ಷಿತಾ ರೂಮಿನ ಫ್ಯಾನಿಗೆ ಓಡನಿಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆಯ ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿ ಪರಿಶೀಲನೆ ನಡೆಸಿದಾಗ ರಕ್ಷಿತಾ ಮೃತಪಟ್ಟಿರುವುದು ದೃಢಪಟ್ಟಿದೆ.
ರಕ್ಷಿತಾ ಗಂಡನ ಮನೆಯಲ್ಲಿ ಸುಖವಾಗಿಯೇ ಇದ್ದರು ಎನ್ನಲಾಗಿದೆ. ಆದರೆ ಯಾವುದೋ ತೀವ್ರವಾದ ವೈಯಕ್ತಿಕ ಅಥವಾ ಮಾನಸಿಕ ಸಮಸ್ಯೆಯನ್ನು ಮನಸ್ಸಿಗೆ ಹಚ್ಚಿಕೊಂಡು ಅವರು ಈ ಕಠಿಣ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Laxmi News 24×7