Breaking News

ಅಶೋಕ್ ಕಸ ಮಾಫಿಯಾ ಗ್ಯಾಂಗ್‌ನ ಏಜೆಂಟ್ ಆಗಿ ಮಾತನಾಡ್ತಿದ್ದಾರೆ: ಸಿಎಂ ಡಿಕೆಶಿ

Spread the love

ನವದೆಹಲಿ: ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಬೆಂಗಳೂರು ಕಸದ ಮಾಫಿಯಾ ಗ್ಯಾಂಗಿನ ಏಜೆಂಟರಾಗಿ ಮಾತನಾಡುತ್ತಿದ್ದಾರೆ. ಈ ಮಾಫಿಯಾ ನಿಯಂತ್ರಿಸಬೇಕು ಎಂದು ನಾನು ಈ ಹಿಂದೆ ಅವರೊಂದಿಗೆ ಚರ್ಚೆ ಮಾಡಿದ್ದೆ. ಈಗ ಅಶೋಕ್ ಅವರು ಮಾಫಿಯಾದ ವಕ್ತಾರರಾಗಿರುವುದು ನನಗೆ ಆಶ್ಚರ್ಯವಾಗಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್  ಅವರು ತಿರುಗೇಟು ನೀಡಿದರು.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಕಸದ ಟೆಂಡರ್ ನಲ್ಲಿ 10 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, ಅವರಿಗೆ ಏನೇನು ಕಸ ಬೇಕೋ ಲಾರಿಯಲ್ಲಿ ತುಂಬಿ ಕಳುಹಿಸಿಕೊಡೋಣ. ಈ ಹಿಂದೆ ಕುಮಾರಸ್ವಾಮಿ ಅವರು ಇದನ್ನೇ ಮಾತನಾಡಿದ್ದರು. ಬೆಂಗಳೂರಿನಲ್ಲಿ ದೊಡ್ಡ ಕಸದ ಲಾಭಿ ಇದೆ. ಅವರ ಕಾಲದಲ್ಲಿ ಯಾಕೆ ಕಸದ ಟೆಂಡರ್ ಮಾಡಲು ಆಗಲಿಲ್ಲ? ಈ ಹಿಂದೆ 14-15 ಜನರಿಗೆ ಕಸದಿಂದ ಇಂಧನ ಉತ್ಪಾದನೆಗೆ ಅವಕಾಶ ನೀಡಿದ್ದೆವು. ಒಬ್ಬರೂ ಯಶಸ್ವಿಯಾಗಿರಲಿಲ್ಲ. ನಾನು ಈ ನಿರ್ಧಾರ ಕೈಗೊಳ್ಳುವ ಮುನ್ನ ದೆಹಲಿ, ಹೈದರಾಬಾದ್, ಚೆನ್ನೈ ಗೆ ಹೋಗಿ ನೋಡಿದ್ದೇನೆ” ಎಂದು ತಿಳಿಸಿದರು.

ʻಈಗ ಕಸ ವಿಲೇವಾರಿಗೆ 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಾರೆ. ನಮ್ಮಲ್ಲಿ ಎಲ್ಲೂ ಜಾಗ ಲಭ್ಯವಾಗಲಿಲ್ಲ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಜಾಗ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಇನ್ನು ನೈಸ್ ಬಿಟ್ಟಿರುವ ಜಾಗ ಪಡೆದಿದ್ದೇವೆ. ಬೇರೆ ಕಡೆ ಯಾರಾದರೂ ಜಾಗ ಕೊಡಲು ಸಿದ್ಧರಿದ್ದರೆ ಮುಂದೆ ಬನ್ನಿ ಎಂಬ ಕರೆಯನ್ನು ನೀಡಿದ್ದೇನೆ. ಲಿಂಬಾವಳಿ ಅವರು ಕಸ ಸಾಗಿಸುವುದನ್ನೇ ನಿಲ್ಲಿಸಿದ್ದರು. ನಾವು ಶಾಸಕರ ಒತ್ತಡದ ಮೇರೆಗೆ 800 ಕೋಟಿ ಅನುದಾನ ನೀಡಿದ್ದೇವೆ. ಕಸದಿಂದ ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಆಗಬೇಕು. ಅವರು ಯಾವ ತನಿಖೆ ಬೇಕಾದರೂ ಮಾಡಲಿ. ಎಲ್ಲಾದರೂ ವರದಿ ನೀಡಲಿ. 36 ಸಾವಿರ ಕೋಟಿ ಅಲ್ಲ, ಕೇವಲ 10 ಕೋಟಿ ಹಣ ದುರ್ಬಳಕೆಯಾದರೂ ತನಿಖೆ ಮಾಡಿಸಲಿ, ಎದುರಿಸಲು ನಾನು ಸಿದ್ಧ ಎಂದರು.

ರಾಜ್ಯಪಾಲರನ್ನ ಭೇಟಿಯಾಗಿದ್ದಾರೆ ಎಂದು ಕೇಳಿದಾಗ, ನಾನು ಮುಖ್ಯಮಂತ್ರಿಯಾಗಿರುವುದನ್ನು ಅವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಅವರ ಪಕ್ಷ, ಬೇರೆ ಪಕ್ಷಗಳಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಏನು ಒತ್ತಡವಿದೆಯೋ ಮಾತನಾಡಿಸುತ್ತಿದ್ದಾರೆ. ಮಾತನಾಡಿಸಲಿ ಯಾವ ತೊಂದರೆಯೂ ಇಲ್ಲ. ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಕಸದ ಟೆಂಡರ್ ಕರೆಯಲು ಬಿಟ್ಟಿಲ್ಲ ಎಂದು ಅವರ ಶಾಸಕರುಗಳೇ ನಮಗೆ ಹೇಳಿದ್ದಾರೆ. ಪ್ರತಿಯೊಂದಕ್ಕೂ ನ್ಯಾಯಾಲಯದ ಮೆಟ್ಟಿಲೇರಲಾಗುತ್ತಿತ್ತು. ಕೊನೆಗೆ ನ್ಯಾಯಾಲಯ ಸರ್ಕಾರದ ತೀರ್ಮಾನ ಸರಿಯಾಗಿದೆ ಎಂದು ತೀರ್ಮಾನ ಮಾಡಿದೆ. ಈಗ ಕೋರ್ಟ್ ತೀರ್ಮಾನ ಆಗಿದ್ದರೂ ನಾನು ಒಂದು ಸಮಿತಿ ರಚನೆ ಮಾಡಿಸಿ ತನಿಖೆ ಮಾಡಿಸಿದ್ದೆ. ಅವರು ಅಸೂಯೆ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಪಾರದರ್ಶಕತೆ, ಕಾರ್ಯವೈಖರಿ ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಹರಿಹಾಯ್ದರು.

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, ʻಗುರುವಾರ ನೀತಿ ಆಯೋಗದ ಸಭೆ ಇದೆ. ಎಲ್ಲಾ ರಾಜ್ಯಗಳ ಸಿಎಂ ಕರೆಯಲಾಗಿದ್ದು, ನಾನು ಮೊದಲ ಬಾರಿಗೆ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವೆ. ಇಂದು ನಮ್ಮ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ಅಲ್ಲದೇ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಕಚೇರಿಗೆ ಭೇಟಿ ನೀಡಿದ್ದೆ. ಅವರೆಲ್ಲ ನಮ್ಮ ಪಕ್ಷದ ಆಧಾರಸ್ತಂಭಗಳು. ನಾನು ರಾಜಕೀಯವಾಗಿ ಬೆಳೆದಿದ್ದು ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ಮೂಲಕ ಎಂದು ತಿಳಿಸಿದರು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಭೇಟಿ ವೇಳೆ ಮಾಡಲಾದ ಚರ್ಚೆ ಬಗ್ಗೆ ಕೇಳಿದಾಗ, ʻನಾನು ಎಲ್ಲವನ್ನು ಹೇಳಲು ಆಗುವುದಿಲ್ಲ. ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ, ರಾಜ್ಯದ ಮುಖ್ಯಮಂತ್ರಿ. ನಾನು ಏನು ಮಾತನಾಡಬೇಕೋ ಮಾತನಾಡಿದ್ದೇನೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲʼ ಎಂದು ಹೇಳಿದರು.

ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿ ಮಾಡಿ, ನಮ್ಮ ರಾಜ್ಯದ ಯೋಜನೆಗಳಿಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿರುವೆ. ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಈ ವಿಚಾರವನ್ನು ಅವರಿಗೆ ವಿವರಿಸಿ, ಯೋಜನೆಗೆ ಅನುಮತಿ ನೀಡುವಂತೆ ಕೇಳಿದೆ. ಇನ್ನು ಕೇಂದ್ರ ಸರ್ಕಾರದ ಅರ್ಬನ್ ಚಾಲೆಂಜ್ ಫಂಡ್ ಮೂಲಕ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ವಿವರಿಸಿದರು.

ಸಂಜೆ ದೆಹಲಿಯಲ್ಲಿರುವ ಕರ್ನಾಟಕ ರಾಜ್ಯದ ಅಧಿಕಾರಿಗಳ ಜೊತೆ ಸಭೆ ಮಾಡಿ ರಾಜ್ಯದ ಹಿತಕ್ಕೆ ಅವರ ಸಲಹೆ ಮಾರ್ಗದರ್ಶನ ಪಡೆಯಲಾಗಿದೆ. ಬೇರೆ ರಾಜ್ಯಗಳು ಕೇಂದ್ರ ಸರ್ಕಾರ ಯೋಜನೆಗಳ ಪ್ರಯೋಜನವನ್ನು ಹೆಚ್ಚಾಗಿ ಪಡೆಯುತ್ತಿದ್ದು, ಯಾವ ಯೋಜನೆಗಳಿಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದು ಚರ್ಚೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿವೃತ್ತಿ ಹೊಂದಿರುವ ಅದಿಕಾರಿಗಳ ಸಭೆಯನ್ನು ಮಾಡಲಾಗುವುದು. ಅವರ ಅನುಭವ ಹಾಗೂ ಸೇವೆ ಬಳಸಿಕೊಳ್ಳುವುದು ನಮ್ಮ ಸರ್ಕಾರದ ಚಿಂತನೆ” ಎಂದು ಹೇಳಿದರು.

ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭೆ ಚುನಾವಣೆ ನಾಮಪತ್ರ ತಿರಸ್ಕೃತ ಬಗ್ಗೆ ಕೇಳಿದಾಗ, ಇದು ದೇಶಕ್ಕೆ ಆಘಾತಕಾರಿ ಸುದ್ದಿ. ನಾನು ಕೂಡ ಅನೇಕ ಚುನಾವಣೆಗಳನ್ನು ಸ್ಪರ್ಧಿಸಿದ್ದೇನೆ. ಚುನಾವಣಾಧಿಕಾರಿ ಅಥವಾ ರಿಟರ್ನಿಂಗ್ ಅಫಿಸರ್ ಗೆ ನಾಮಪತ್ರ ತಿರಸ್ಕೃತಗೊಳಿಸುವ ಅಧಿಕಾರವಿರುವುದಿಲ್ಲ. ಅಲ್ಲಿ ಏನಾದರೂ ಸಮಸ್ಯೆ ಇದ್ದರೆ ಚುನಾವಣೆ ಬಳಿಕ ನ್ಯಾಯಾಲಯದ ಮೊರೆ ಹೋಗಬಹುದಿತ್ತು. ನಮ್ಮಗೆ ಗೊತ್ತಿಲ್ಲದಂತೆ ನಮ್ಮ ಹೆಸರಿನಲ್ಲಿ ಬೇರೆಲ್ಲೋ ಎಫ್ಐಆರ್ ದಾಖಲಿಸಿದ್ದರೆ ಅದು ನಮಗೆ ಹೇಗೆ ತಿಳಿಯುತ್ತದೆ? ಆಕೆ ನಮ್ಮ ಪಕ್ಷದ ನಾಯಕಿ. ನನ್ನ ನಾಮಪತ್ರ ಸಲ್ಲಿಕೆ ವೇಳೆ ಈ ರೀತಿ ಆದಾಗ ತಿದ್ದುಕೊಳ್ಳಲು ಅವಕಾಶ ನೀಡಿದ್ದರು. ಇದು ರಾಜಕೀಯ ಪಿತೂರಿಯಾಗಿದ್ದು, ನಮ್ಮಲ್ಲಿ ಹೆಚ್ಚು ಮತಗಳಿದ್ದರೂ ಬಿಜೆಪಿ ಚುನಾವಣೆಗೂ ಮುನ್ನವೇ ಎಲ್ಲಾ ಸೀಟು ಗೆಲ್ಲುತ್ತೇವೆ ಎಂದು ಹೇಳಲು ಹೇಗೆ ಸಾಧ್ಯ? ಮಧ್ಯಪ್ರದೇಶದಲ್ಲಿ ನಡೆದಿರುವು ಅನ್ಯಾಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸುವ ಪ್ರಕರಣ” ಎಂದು ಅಸಮಾಧಾನ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಸಿಗರೇಟ್ ಸೇದಿರುವ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ – ಬಾಲಕನಿಂದ 120 ಗ್ರಾಂ ಚಿನ್ನ ಲೂಟಿ

Spread the loveಕೊಪ್ಪಳ: ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದುವುದನ್ನು ಕಲಿಸಿ, ಅದರ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿ ಸುಮಾರು 120 ಗ್ರಾಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ