Breaking News

ಮೇಲುಕೋಟೆ ದೇವಸ್ಥಾನದಲ್ಲಿ ಕಳ್ಳತನ – ಅರ್ಚಕ, ಸಿಬ್ಬಂದಿ ವಿರುದ್ಧ ಕೇಸ್‌

Spread the love

ಮಂಡ್ಯ: ಐತಿಹಾಸಿಕ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿ ವಿರುದ್ಧವೇ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

​ದೇವಸ್ಥಾನದ ಹುಂಡಿಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಕಳ್ಳತನವಾಗಿದೆ ಎಂದು ಆರೋಪಿಸಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರು ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಹಿಂದೆ ನಡೆದಿದ್ದ ಪ್ರಸಿದ್ಧ ವಜ್ರಾಂಗಿ ಆಭರಣ ಕಳ್ಳತನದ ಬಳಿಕ, ಇಷ್ಟೊಂದು ದೊಡ್ಡ ಪ್ರಮಾಣದ ಕಳ್ಳತನದ ಶಂಕೆ ವ್ಯಕ್ತವಾಗಿರುವುದು ಭಕ್ತರಲ್ಲಿ ತೀವ್ರ ಆತಂಕ ಮೂಡಿಸಿದೆ.

​ದೇವಾಲಯದಲ್ಲಿ ಕಿಡಿಗೇಡಿಗಳು ಪದೇ ಪದೇ ಸಿಸಿ ಕ್ಯಾಮೆರಾಗಳನ್ನ ಕೆಡಿಸುತ್ತಿದ್ದ ಹಿನ್ನೆಲೆಯಲ್ಲಿ, ಆಡಳಿತ ಮಂಡಳಿಯು ಅತ್ಯಂತ ಗೌಪ್ಯವಾಗಿ ರಹಸ್ಯ ಸಿಸಿ ಕ್ಯಾಮೆರಾಗಳನ್ನ ಅಳವಡಿಸಿತ್ತು. ಈ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿರುವ ವಿಚಾರ ಕೇವಲ ದೇವಾಲಯದ ಆಡಳಿತ ಸಿಬ್ಬಂದಿಗೆ ಮಾತ್ರ ತಿಳಿದಿತ್ತು. ​ಆದರೆ, 2026 ರ ಜನವರಿ 12 ರಂದು ಈ ರಹಸ್ಯ ಸಿಸಿ ಕ್ಯಾಮೆರಾವನ್ನು ಸಹ ಕಿಡಿಗೇಡಿಗಳು ಕೆಡಿಸಿದ್ದಾರೆ. ಆಡಳಿತ ಮಂಡಳಿಗೆ ಮಾತ್ರ ಗೊತ್ತಿದ್ದ ಈ ರಹಸ್ಯ ಕ್ಯಾಮೆರಾ ಹಾಳು ಮಾಡಿರುವುದು, ಕಳ್ಳತನದ ಉದ್ದೇಶದಿಂದಲೇ ದೇವಸ್ಥಾನದ ಒಳಗಿನ ಸಿಬ್ಬಂದಿ ಹಾಗೂ ಅರ್ಚಕರೇ ಈ ಕೃತ್ಯ ಎಸಗಿದ್ದಾರೆ ಎಂಬ ಬಲವಾದ ಶಂಕೆಗೆ ಕಾರಣವಾಗಿದೆ.

​ದೇವಸ್ಥಾನದ ಇಒ ಶೀಲಾ ಅವರ ದೂರಿನನ್ವಯ ಪೊಲೀಸರು ಒಟ್ಟು 5 ಮಂದಿ ಪ್ರಮುಖರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ​ಶ್ರೀಧರ್ (ಪಾರುಪತ್ತೆಗಾರ), ​ನಾರಾಯಣ ಭಟ್ಟ (ಅರ್ಚಕ), ​ತಿರುವೆಂಗಡಚಾರ್ (ಪರಿಚಾರಕ), ​ಗಂಗಾಧರ್ ಮತ್ತು ಬಸವರಾಜ್ (ಕಾವಲುಗಾರರು) ವಿರುದ್ಧ ಕೇಸ್‌ ದಾಖಲಾಗಿದೆ.

​ಜನವರಿ 12 ರಂದು ಈ ಕೃತ್ಯ ನಡೆದ ಬೆನ್ನಲ್ಲೇ ದೇವಸ್ಥಾನದ ಇಒ ಶೀಲಾ ಅವರು ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದರು. ಆದರೆ, ನೋಟಿಸ್‌ಗೆ ಸಿಬ್ಬಂದಿ ಕಡೆಯಿಂದ ಯಾವುದೇ ಸರಿಯಾದ ಉತ್ತರ ಬಾರದ ಹಿನ್ನೆಲೆಯಲ್ಲಿ, ಇಒ ಅವರು ತಡವಾಗಿ ಮೇಲುಕೋಟೆ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ.

​ಸದ್ಯ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಒಳಗಿನವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರಾ ಅಥವಾ ಇದರ ಹಿಂದೆ ಬೇರೆ ಜಾಲವಿದೆಯಾ ಎಂಬುದು ತನಿಖೆಯಿಂದ ಹೊರಬರಬೇಕಿದೆ.


Spread the love

About Laxminews 24x7

Check Also

ಸಿಗರೇಟ್ ಸೇದಿರುವ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ – ಬಾಲಕನಿಂದ 120 ಗ್ರಾಂ ಚಿನ್ನ ಲೂಟಿ

Spread the loveಕೊಪ್ಪಳ: ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದುವುದನ್ನು ಕಲಿಸಿ, ಅದರ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿ ಸುಮಾರು 120 ಗ್ರಾಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ