ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಹಲವೆಡೆ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಕರ್ನಾಟಕಕ್ಕೆ (Karnataka) ಯೆಲ್ಲೋ ಅಲರ್ಟ್ ಘೋಷಿಸಿದ್ದು, ಇನ್ನೂ ನಾಲ್ಕು ದಿನ ಬೆಂಗಳೂರು (Bengaluru) ಸೇರಿ 19 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಿದೆ.
ಆರಂಭದಲ್ಲೇ ವರುಣ ಅಬ್ಬರಿಸುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. 2018-19ರ ಸಾಲಿನ ಮಳೆಗಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿತ್ತು. ಕೊಡಗು (Kodagu) ಜಿಲ್ಲೆ ಬೆಟ್ಟ ಗುಡ್ಡಗಳಿಂದ ಕೂಡಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದೆ. ಗುಡ್ಡ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ನೋಟಿಸ್ ನೀಡಲು ಚಿಂತನೆ ನಡೆದಿದೆ. ಈಗಾಗಲೇ ಅಪಾಯಕಾರಿ ಸ್ಥಳದಲ್ಲಿರುವ ಮನೆಗಳ ಗುರುತು ಕಾರ್ಯ ನಡೆದಿದೆ. ಮಡಿಕೇರಿಯ ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದಲ್ಲಿ 1,300 ಮನೆಗಳನ್ನು ಗುರುತಿಸಲಾಗಿದೆ. ಉಳಿದಂತೆ ಮಡಿಕೇರಿಯ (Madikeri) ಮಂಗಳಾದೇವಿನಗರದ 200 ಮನೆಗಳು, ಅಜಾದ್ನಗರದ 350 ಮನೆಗಳನ್ನು ಗುರುತಿಸಲಾಗಿದೆ. ಅಲ್ಲದೆ ಕುಶಾಲನಗರ ನೆಲ್ಲಿಹುದಿಕೇರಿ, ಕರಡಿಗೋಡು ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಉಡುಪಿ ಪ್ರವಾಸಿ ತಾಣವಾದ ಮಲ್ಪೆ ಬೀಚ್ಗೆ (Malpe Beach) ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಸದ್ಯ ಆಗಮಿಸುವ ಪ್ರವಾಸಿಗರಿಗೆ ನಿರಾಸೆ ಕಾದಿದೆ. ಮಳೆಗಾಲದಲ್ಲಿ ಸಮುದ್ರ ಕ್ಷಣದಿಂದ ಕ್ಷಣಕ್ಕೆ ತನ್ನ ಸ್ವಭಾವ ಬದಲಾಯಿಸುತ್ತದೆ. ಗಾಳಿ ಒತ್ತಡ ಹೆಚ್ಚಾದಂತೆ ಅಲೆಗಳ ರೌದ್ರನರ್ತನ ಆರಂಭವಾಗುತ್ತದೆ. ಹೀಗಾಗಿ ಪ್ರಕ್ಷುಬ್ಧಗೊಂಡ ಸಮುದ್ರದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುವ ಕಾರಣಕ್ಕೆ ಜಿಲ್ಲಾಡಳಿತ ಸಮುದ್ರಕ್ಕೆ ಇಳಿಯುವುದಕ್ಕೆ ನಿರ್ಬಂಧ ವಿಧಿಸುತ್ತದೆ. ಸದ್ಯ ಸಮುದ್ರ ತೀರದ ಬಳಿ ಸುಮಾರು 1 ಕಿಲೋಮೀಟರ್ ಉದ್ದಕ್ಕೂ 10 ಅಡಿ ಎತ್ತರದ ತಡೆಬೇಲಿ ಅಳವಡಿಸಿದೆ. ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.
ಸೆಪ್ಟೆಂಬರ್ 15ರ ತನಕ ಪ್ರವಾಸಿಗರಿಗೆ ಮಲ್ಪೆ ಬೀಚ್ ಸಮುದ್ರಕ್ಕೆ ಇಳಿಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ತಡೆಬೇಲಿ ಹಾಕುವುದರ ಜೊತೆಗೆ ಟೂರಿಸ್ಟ್ ಪೊಲೀಸ್, ಲೈಫ್ ಗಾರ್ಡ್ಗಳು, ಪೊಲೀಸ್ ಹೋಮ್ ಗಾರ್ಡ್ ಕೂಡ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಕಣ್ಗಾವಲು ಇಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಬಳಿ ಭಾರಿ ಮಳೆಗೆ ಕಿರಿದಾದ ಸೇತುವೆ ಕುಸಿತಗೊಂಡಿದೆ. ಇದು ಚಿಮ್ಮನಚೋಡ-ನರನಾಳ ಗ್ರಾಮದ ಮಧ್ಯದ ಸಂಪರ್ಕ ಸೇತುವೆಯಾಗಿದ್ದು, ಕುಸಿದ ನ್ನೆಲೆ ಚಿಂಚೋಳಿಯಿಂದ ಭಾಲ್ಕಿ ತಾಲೂಕಿಗೆ ಸಂಚಾರ ಸ್ಥಗಿತಗೊಂಡಿದೆ. ಇನ್ನು ನಿರಂತರ ಮಳೆಗೆ ಚಿಂಚೋಳಿ ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಜನ ಪರದಾಡುವಂತಾಗಿದೆ.
ಬೆಂಗಳೂರಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮಂಗಳೂರಿಗೆ ಎನ್ಡಿಆರ್ಎಫ್ ಪಡೆಗಳು ಆಗಮಿಸಿವೆ.
Laxmi News 24×7