Breaking News

ಪದವಿ ಪಡೆಯುವುದು ಹೊಸ ಜೀವನ ಆರಂಭ ಇದ್ದಹಾಗೆ: ಡಾ. ವಿದ್ಯಾ ಯೆರವಡೆಕರ

Spread the love

ತಾಯಿ ಜನ್ಮ ನೀಡಿದ ದಿನ ಅತ್ಯಂತ ಮುಖ್ಯವಾಗಿದ್ದು, ಅದರಂತೆ ನೀವು ಪದವಿ ಪಡೆಯುತ್ತಿರುವದು ಸಾಮಾಜಿಕ ಜನ್ಮ. ಹೊಸ ಜೀವನ ಆರಂಭವಾಗಿದೆ.  ಇಲ್ಲಿಯವರೆಗೆ ನಿಮ್ಮನ್ನು ನಿಮ್ಮ ಪಾಲಕರು, ಕುಟುಂಬ, ಸ್ನೇಹಿತರು ಬೆಂಬಲಿಸಿದ್ದಾರೆ. ಆದರೆ ಇಂದಿನಿಂದ ನೀವು ಸಮಾಜದಲ್ಲಿ ವೈದ್ಯರು ಮತ್ತು ಆರೋಗ್ಯ ವೃತ್ತಿಪರರಾಗಿ ಹೊಸ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಜಗತ್ತು ತುಂಬಾ ವಿಭಿನ್ನವಾಗಿದೆ. ವೈದ್ಯಕೀಯ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಜಾಗತಿಕ ಬೆಳವಣಿಗೆಗಳು, ತಂತ್ರಜ್ಞಾನ, ಸಮಾಜದ ಅಗತ್ಯತೆಗಳನ್ನು ಅರಿತುಕೊಂಡು ಸಾಮಾಜಿಕ ಬದ್ದತೆ ಹಾಗೂ ಕಳಕಳಿಯಿಂದ ಮುನ್ನಡೆಯಬೇಕೆಂದು ಪೂನೆಯ ಸಿಂಬಾಸಿಸ್ ಸೊಸಾಯಟಿಯ ಪ್ರನ್ಸಿಪಲ್ ಡೈರೆಕ್ಟರ ಹಾಗೂ ಸಿಂಬಾಸಿಸಿ ಇಂಟರನ್ಯಾಶನಲ್ ಯುನಿರ್ವಸಿಸಿಟಯ ಪ್ರೊ ಚಾನ್ಸಲರ್ ಡಾ. ವಿದ್ಯಾ ಯೆರವಡೆಕರ ಅವರಿಂದಿಲ್ಲಿ ಹೇಳಿದರು.

ಬೆಳಗಾವಿಯ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (KAHER) (ಡೀಮ್ಡ್ ಟು ಬಿ ಯುನಿವರ್ಸಿಟಿ)ಯ ಇಂದು 16ನೇ ಘಟಿಕೋತ್ಸವದ ಭಾಷಣ ಮಾಡಿದ ಅವರು, ತಂತ್ರಜ್ಞಾನವು ಅದರಲ್ಲಿಯೂ ಮುಖ್ಯವಾಗಿ ಕೃತಕ ಬುದ್ಧಿಮತ್ತೆಯು ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾರ್ಪಡಿಸುತ್ತದೆ. ಹಳ್ಲೀಯಾಗಿರಲಿ, ದೊಡ್ಡ ನಗರವಾಗಿರಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ. ನಿರಂತರವಾಗಿ ಅದನ್ನು ಅಭ್ಯಸಿಸಿ. ತಂತ್ರಜ್ಞಾನ ಬಳಸುವಾಗ ರೋಗಿಯ ಕಡೆ ಆದ್ಯತೆ ಇರಲಿ. ಒಳ್ಳೆಯ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ರೋಗಿಗಳೊಂದಿಗೆ ಮಾತನಾಡಿ, ಅವರ ಸಮಸ್ಯೆಯನ್ನು ಆಲಿಸಿ, ರೋಗಿಗಳಿಗೆ ಔಷಧಕ್ಕಿಂತ ಹೆಚ್ಚು ಅಗತ್ಯವಿರುವುದು ಅವರ ಸಮಸ್ಯೆಗಳನ್ನು ಆಲಿಸುವದಾಗಿದೆ ಎಂದು ಸಲಹೆ ನೀಡಿದರು.

ವೈದ್ಯಕೀಯ ವೃತ್ತಿಯು ಒಂದು ತಂಡವಾಗಿ ಕಾರ್ಯನಿರ್ವಹಿಸುವದಾಗಿದೆ. ಆದ್ದರಿಂದ ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಿ. ದೇಶ ವಿದೇಶದ ವಿವಿಧ ಭಾಗಗಳ ಸ್ನೇಹಿತರನ್ನು ಕಾಲೇಜಿನಲ್ಲಿ ಪಡೆದಿದ್ದೀರಿ. ಈ ವೈವಿಧ್ಯತೆ ನಿಮ್ಮ ವ್ಯಕ್ತಿತ್ವವನ್ನು ಶ್ರೀಮಂತಗೊಳಿಸುತ್ತದೆ ಎಂದ ಅವರು, 12ನೇ ತರಗತಿಯ ಫಲಿತಾಂಶವೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತಿತ್ತು. ಕಾಹೆರ ಕ್ಯಾಂಪಸ್ನಲ್ಲಿ ನಡೆದಾಡಿದಾಗ, ಅದರ ಸೌಂದರ್ಯ ಮಾತ್ರವಲ್ಲ, ಅದರ ಸಂಸ್ಕೃತಿಯೂ ಶ್ರೀಮಂತವಾಗಿದೆ.. ಪ್ರತಿಯೊಂದು ಸಂಸ್ಥೆಯಲ್ಲೂ ಒಂದು ವಿಶಿಷ್ಟ ಸಾಂಸ್ಕೃತಿಕ ವಾತಾವರಣ ಇದೆ. ಈ ಸಂಸ್ಥೆ ನೀಡಿದ ಮೌಲ್ಯಗಳು, ನೈತಿಕತೆ ಮತ್ತು ಶಿಕ್ಷಣದ ಮೇಲೆ ಹೆಮ್ಮೆ ಇರಲಿ. ಆಲ್ಮಾ ಮೀಟರ್’ ಅನ್ನು ಮರೆಯಬೇಡಿ. ಸಾಧ್ಯವಾದಷ್ಟು ಕಲಿತ ಸಂಸ್ಥೆಗೆ ಮರಳಿ ಕೊಡುಗೆ ನೀಡಿ. ನಿಮ್ಮ ಪಾಲಕರ ಪರಿಶ್ರಮವನ್ನು ಸದಾ ನೆನಪಿಡಿ. ನಿಮ್ಮ ಶಿಕ್ಷಕರು ನಿಮ್ಮನ್ನು ರೂಪಿಸಿದ ಶಿಲ್ಪಿಗಳು. ಅವರಿಗೂ ಕೃತಜ್ಞರಾಗಿರಿ. ನಿಮ್ಮ ಭವಿಷ್ಯ ಉಜ್ವಲವಾಗಿರಲಿ. ನೀವು ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲಿ. ಈ ಸಂಸ್ಥೆಯನ್ನು ಸದಾ ನೆನಪಿಟ್ಟುಕೊಳ್ಳಿ ಎಂದು ಹೇಳಿದರು.

ವಾರ್ಧಾ ಸವಾಂಗಿಯ ದತ್ತಾ ಮೆಘೆ ಇನ್ಸ್ಟಿಟ್ಯೂಟ್ ಆಫ್ ಹೈಯರ ಎಜ್ಯುಕೇಶನ್ ಆಂಡ ರಿಸರ್ಚನ ಉಪಕುಲಪತಿ ಡಾ. ಲಿಲಿತಭೂಷಣ ವಾಘ್ಮರೆ ಅವರು ಮಾತನಾಡಿ, ಸಾಧಕರು ಜೀವನದಲ್ಲಿ ನಾವು ಅನುಸರಿಸಬೇಕಾದ ಆದರ್ಶ ವ್ಯಕ್ತಗಳಾಗಿದ್ದಾರೆ. ಜೀವನದಲ್ಲಿ ಕೆಲವರಿಗೆ ಸಮಯವಿರುತ್ತದೆ, ಕೆಲವರಿಗೆ ಜ್ಞಾನ ಮತ್ತು ಮೌಲ್ಯವಿರುತ್ತದೆ, ಕೆಲವರು ಸೌಂದರ್ಯ ಮತ್ತು ಶೈಲಿಯನ್ನು ಹೊಂದಿರುತ್ತಾರೆ, ಮತ್ತಿತರರು ವೃತ್ತಿಪರತೆಯನ್ನು ಹೊಂದಿರುತ್ತಾರೆ. ಆದರೆ ಈ ಎಲ್ಲ ಗುಣಗಳ ಸಮನ್ವಯ ಒಂದೇ ವ್ಯಕ್ತಿಯಲ್ಲಿ ಕಾಣುವುದು ಅಪರೂಪ ಎಂದ ಅವರು ಪಾಲಕರು ನಿಮ್ಮ ಜೀವನದ ನಿಜವಾದ ಹೂಡಿಕೆದಾರರು. ಅವರ ಶ್ರಮದಿಂದ ನಿಮ್ಮ ಯಶಸ್ಸಿನ “ಸ್ಟಾರ್ಟ್ಅಪ್” ಇಂದು ಬೆಳಕನ್ನು ಕಂಡಿದೆ. ಇದು ಅವರ ಕನಸಿನ ಮುಂದುವರಿದ ಹಂತ. ಆತ್ಮವಿಶ್ವಸದಿಂದ ಜೀವನದಲ್ಲಿ ಮುನ್ನುಗ್ಗಿ. ಪದವಿ ಪಡೆಯುವದು ಅಂತಿಮವಲ್ಲ ಇದು ಪ್ರಾರಂಭ. ಆದರೆ ನಿರಂತರ ಅಭ್ಯಾಸದಿಂದ ಮಾತ್ರ ನೈಪುಣ್ಯ ಬರುತ್ತದೆ. ವೃತ್ತಿಪರರಾಗಿರಿ, ಆದರೆ ಜೀವನವನ್ನೂ ಆನಂದಿಸಿ. ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡಿ. ಕುಟುಂಬ, ಸ್ನೇಹಿತರು ಮತ್ತು ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಿ. ಕೇವಲ ವೃತ್ತಿಜೀವನವೇ ಸಾಕಾಗುವುದಿಲ್ಲ. ಕುತುಹಲವೇ ಜೀವನದ ಯಶಸ್ಸಿನ ಮೆಟ್ಟಿಲು. ಕೃತಕ ಬುದ್ದಿಮತ್ತೆ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಆದರೆ ಆ ಪ್ರಶ್ನೆ ನಿಮ್ಮಲ್ಲಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ನೀವು ಸಮಾಜ ಸೇವೆಯಲ್ಲಿರಬೇಕಾದರೆ ಹಾಲಿಗೆ ಸಕ್ಕರೆ ಸೇರಿಸಿದಂತೆ ಇದ್ದಾಗ ಮಾತ್ರ ನಿಮ್ಮಿಂದ ಸಮಾಜ ಇನ್ನಷ್ಟು ಸುಂದರವಾಗಲಿ. ಇದು ನಿಮ್ಮ ಜೀವನದ ಪ್ರಾರಂಭ ಮಾತ್ರ ಎಂದು ಎಚ್ಚರಿಕೆ ನೀಡಿದರು.

ಅಮೇರಿಕಾದ ಥಾಮಸ್ ಜೆಪ್ಪರಸನ್ ವಿಶ್ವವಿದ್ಯಾಲಯದ ಹಿರಿಯ ಯುರಾಲಾಜಿಸ್ಟ ಡಾ. ಲಿಯೋನಾರ್ಡ ಗೊಮೆಲ್ಲೊ ಅವರಿಗೆ ಡಾಕ್ಟರ ಆಫ್ ಸೈನ್ಸ್ ನೀಡಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಗೆಮೊಲ್ಲೊ ಅವರು, ಕಾಹೆರ ಮತ್ತು ಥಾಮಸ್ ಜೆಪ್ಪರಸನ್ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಕೇಂದ್ರಿತ ಸಹಕಾರವನ್ನು ಉತ್ತೇಜಿಸುವ ಮೂಲಕ ಜಾಗತಿಕ ದೃಷ್ಟಿಕೋಣ ಹೊಂದಿದ ಹೊಸ ಪೀಳಿಗೆಯ ಆರೋಗ್ಯ ನಾಯಕತ್ವವನ್ನು ಬೆಳೆಸುವ ಕಾರ್ಯ ಮಾಡಲಾಗುತ್ತದೆ. ಇದು ಆರೋಗ್ಯ ಸೇವಾ ವಿತರಣೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನೆರವಾಗುತ್ತದೆ ಎಂದು ಹೇಳಿದರು.

ಭಾರತದಲ್ಲಿ ಅನೇಕ ಅನುದಾನಿತ ಸಂಶೋಧನಾ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಕಣ್ಣು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಸಹಕಾರಿಯಾಗಿದೆ. ಈ ಸಹಕಾರವು  ಸಂಶೋಧನೆ ಮತ್ತು ನವೀನತೆಯನ್ನು ಉತ್ತೇಜಿಸುವಲ್ಲಿ ಪಾತ್ರವಹಿಸುತ್ತಿದೆ. ಸಾರ್ವಜನಿಕ ಆರೋಗ್ಯದ ತತ್ವಗಳು, ಸಾಮಾಜಿಕ ಚಟುವಟಿಕೆಗಳು ಮತ್ತು ಶಿಕ್ಷಣದ ಮೂಲಕ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶದಿಂದ, ಶಿಕ್ಷಣ ಪರಿವರ್ತನೆಯ ಮನೋಭಾವದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಕಾಹೆರನ ಉಪಕುಲಪತಿ ಡಾ. ಸಂದೀಪ ಶ್ರೀವಾತ್ಸವ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆಂಡ ರಿಸರ್ಚನ ಕುಲಪತಿ ಡಾ. ಪ್ರಭಾಕರ ಕೋರೆ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ. ವಿ.ಎಂ. ಪಟ್ಟಣಶೆಟ್ಟಿ ಹಾಗೂ ಪರೀಕ್ಷಾ ನಿಯಂತ್ರಕರಾದ ಡಾ. ಚಂದ್ರ ಎಸ್. ಮೆಟಗುಡ್ ಅವರು ಉಪಸ್ಥಿತರಿದ್ದರು.

ಈ ಘಟಿಕೋತ್ಸವದಲ್ಲಿ ಆರೋಗ್ಯ ವಿಜ್ಞಾನಗಳ ವಿವಿಧ ವಿಭಾಗಗಳಲ್ಲಿ ಒಟ್ಟು 1810 ಪದವಿಗಳನ್ನು ಪ್ರದಾನ ಮಾಡಲಾಯಿತು. 40 ಚಿನ್ನದ ಪದಕಗಳು, 44 ಪಿಹೆಚ್.ಡಿ., 28 ಪೋಸ್ಟ್-ಡಾಕ್ಟರಲ್, 691 ಸ್ನಾತಕೋತ್ತರ, 1013 ಸ್ನಾತಕ ಹಾಗೂ 34 ಸ್ನಾತಕೋತ್ತರ ಡಿಪ್ಲೊಮಾ, ಫೆಲೋಶಿಪ್ ಮತ್ತು ಪ್ರಮಾಣಪತ್ರ ಕೋರ್ಸ್ಗಳ ಪದವಿ ಪ್ರದಾನ ಮಾಡಲಾಯಿತು. 34 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದು,  ಅದರಲ್ಲಿ 26 ವಿದ್ಯಾರ್ಥಿನಿಯರು, 8 ವಿದ್ಯಾರ್ಥಿಗಳಿಗೆ 40 ಸುವರ್ಣ ಪದಕ ಪ್ರದಾನ ಮಾಡಲಾಯಿತು.

ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಡಾ. ಆದಿತ್ಯ ಪೊರವಾಲ ಅವರು ಎಂಬಿಬಿಎಸನಲ್ಲಿ 2,  ಫಿಸಿಯೋಥೆರಪಿಯ ಡಾ. ಅನಸ್ತಾಸಿಯಾ ಎ. ಕಾರ್ವಾಲ್ಹೋ ಅವರು ಬಿಪಿಟಿಯಲ್ಲಿ  2 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಡಾ. ಅವಿನಾಶ್ ಕವಿ ಮತ್ತು ಡಾ. ನೇಹಾ ಧಡೆಡ್ ಅವರು ಕಾರ್ಯಕ್ರಮ ನಿರೂಪಿಸಿದರು.


Spread the love

About Laxminews 24x7

Check Also

ಮನವೊಲಿಸಿ, ಒಪ್ಪದಿದ್ರೆ ರಾಜೀನಾಮೆ ಅಂಗೀಕರಿಸಿ – ಒಂದು ಸಾಲಿನ ಸಂದೇಶ ಕೊಟ್ಟ ರಾಹುಲ್‌ ಗಾಂಧಿ

Spread the loveಬೆಂಗಳೂರು: ʻಬೆಂಗಳೂರು ಅಭಿವೃದ್ಧಿʼ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ತೀವ್ರ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ  ಅವರು ಸಚಿವ ಸ್ಥಾನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ