ಚಿಕ್ಕಮಗಳೂರು: ಮೊದಲ ಸಂಪುಟ ಸಭೆಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಸಿಕ್ಸರ್ ಹೊಡೆದ್ರು ಎಂದು ಬಿಂಬಿಸಲಾಗಿತ್ತು. ಈಗ ಹಿಟ್ ವಿಕೆಟ್ ಆಗಿದೆ ಎಂದು ಎಂಎಲ್ಸಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ನಗರದ ಬಸವನಹಳ್ಳಿಯಲ್ಲಿರೋ ತಮ್ಮ ನಿವಾಸದಲ್ಲಿ ಅವರು ಮಾತನಾಡಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಸಂಪುಟದ ಮೊದಲ ವಿಕೆಟ್ ಪತನವಾಗಿದೆ. ಸಂಪುಟ ದರ್ಜೆಯ ಸಚಿವ, ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರೋದು ಆಂತರಿಕವಾಗಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಸ್ಪಷ್ಟಪಡಿಸಿದೆ. ಇದು ಭವಿಷ್ಯದ ಬೆಳವಣಿಗೆಗಳನ್ನ ಸೂಚಿಸುತ್ತೆ. ನಮ್ಮ ಆತಂಕ ಇದು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅನ್ನೋದಾಗಿದೆ ಎಂದರು.
ರಾಮಲಿಂಗಾರೆಡ್ಡಿ ಕೊಟ್ಟ ಮಾತು ತಪ್ಪಿದ್ದಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಪ್ರಶ್ನೆಗೆ, ಯಾರು, ಯಾರಿಗೆ ಮಾತು ಕೊಟ್ಟಿದ್ದರು ಎಂಬುದು ನಮಗೆ ಗೊತ್ತಿಲ್ಲ. ಜನರಿಗೆ ಗೊತ್ತಾಗ್ತಿರೋದು ರಾಜೀನಾಮೆ, ಆಂತರಿಕ ಬೇಗುದಿ ಮಾತ್ರ. ಜೊತೆಗೆ, ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹಣಕಾಸಿನ ಪರಿಸ್ಥಿತಿಗೆ ಕನ್ನಡಿ ಹಿಡಿದಿರೋದು, ರಾಮಲಿಂಗಾರೆಡ್ಡಿ ರಾಜೀನಾಮೆ ಇವೆಲ್ಲಾ ಭವಿಷ್ಯದ ಮುನ್ಸೂಚನೆ ಕೊಡುತ್ತಿವೆ. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಎಂದು ಭಾವಿಸುವಂತಿಲ್ಲ. ಹೇಗೆ ಭಾವಿಸೋಕೆ ಸಾಧ್ಯ ಎಂದು ಪ್ರಶ್ನಿಸಿದರು.
ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚನೆಯೇ ಆಗಿಲ್ಲ. ಈಗಲೇ, ಹಿರಿಯ ಸಚಿವರಲ್ಲೇ ಈ ರೀತಿಯ ಆಂತರಿಕ ಬೇಗುದಿ ಇರುವಾಗ ಪೂರ್ಣ ಪ್ರಮಾಣದಲ್ಲಿ ಸಂಪುಟ ರಚನೆಯಾದಾಗ ಸ್ಫೋಟವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.
ಬಣ ರಾಜಕೀಯ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತೆ ಅದು ಬೇರೆ ಪ್ರಶ್ನೆ. ಆದರೆ, ಆ ಬಣ ರಾಜಕೀಯ ರಾಜ್ಯ ಹಾಗೂ ಪಕ್ಷದ ಹಿತವನ್ನ ಮೀರಬಾರದು. ಆ ಸ್ಪರ್ಧೆ ರಾಜಕೀಯ ಹಿತವನ್ನೂ ಮೀರಬಾರದು, ಮೀರಿದರೆ ರಾಜ್ಯ-ಆಡಳಿತದ ಮೇಲೆ ಪರಿಣಾಮ ಬೀರುತ್ತೆ ಎಂದು ಎಚ್ಚರಿಸಿದ್ದಾರೆ.
Laxmi News 24×7