ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯೊಬ್ಬರ ನಿಗೂಢ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಾಜಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ದೇವಸ್ಮಿತಾ ಪೌಲ್ ಕೊಲೆಯಾದ ದುರ್ದೈವಿ. ಇವರು ಪೂರ್ವ ದೆಹಲಿಯ ವಸುಂಧರಾ ಎನ್ಕ್ಲೇವ್ನ ಸತ್ಯಂ ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇವರ ಪತಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ 2:25 ರ ಸುಮಾರಿಗೆ ದೇವಸ್ಮಿತಾ ಪೌಲ್ ಸಹೋದರಿ ದೇವಾರತಿ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆಯ ಮಾಹಿತಿ ನೀಡಿದ್ದಾರೆ. ಮುಂಜಾನೆಯಿಂದ ಫ್ಲಾಟ್ ಹೊರಗಿನಿಂದ ಲಾಕ್ ಆಗಿತ್ತು. ಆಗ ದೇವಸ್ಮಿತಾಗೆ ಕರೆ ಮಾಡಲಾಗಿದೆ. ಸುಮಾರು ಬಾರಿ ಕರೆ ಮಾಡಿದರೂ, ಆಕೆ ಉತ್ತರಿಸಿಲ್ಲ. ಇದರಿಂದ ಆತಂಕಗೊಂಡ ಸಹೋದರಿ ದೇವಾರತಿ ಫ್ಲಾಟ್ ಬೀಗ ಮುರಿದು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ದೇವಸ್ಮಿತಾ ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಗಂಭೀರ ಗಾಯವಾಗಿದೆ. ಅಷ್ಟೇ ಅಲ್ಲದೆ ಅವರ ಮಣಿಕಟ್ಟಿನ ನರಗಳನ್ನು ಕೂಡ ಕತ್ತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಲ್ಬಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣ ಸೇರಿದಂತೆ ಯಾವುದೇ ಇನ್ನಿತರ ವಸ್ತುಗಳು ಕಳುವಾಗಿಲ್ಲ. ಆದ್ದರಿಂದ ಪೊಲೀಸರು ಇದು ಕಳ್ಳತನ ಅಥವಾ ದರೋಡೆಗಾಗಿ ನಡೆದಿರುವ ಕೊಲೆಯಲ್ಲ ಎಂದು ಅಂದಾಜಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳಿಗಾಗಿ ಬಲೆಬೀಸಿದ್ದಾರೆ. ಘಟನೆಯ ಕುರಿತು ಸತ್ಯಾಸತ್ಯತೆ ತೆರದಿಡಲು ತನಿಖಾ ತಂಡಗಳನ್ನು ರಚಿಸಿದ್ದಾರೆ.
Laxmi News 24×7