ಬೆಳಗಾವಿ: ಉತ್ತರ ಕರ್ನಾಟಕದಿಂದ ಅಲ್ಪಸಂಖ್ಯಾತರು ಯಾರೂ ಸಚಿವರು ಆಗಿಲ್ಲ. ನನಗೆ ಸ್ಥಾನ ಕೊಡುವುದರಿಂದ ಉತ್ತರ ಕರ್ನಾಟಕ ಅಭಿವೃದ್ಧಿಗೆ ಅನುಕೂಲ ಆಗಲಿದೆ. ಅಲ್ಪಸಂಖ್ಯಾತ ಕೋಟಾದಲ್ಲಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಶಾಸಕ ಆಸೀಫ್ ಸೇಠ್ ಬೇಡಿಕೆ ಇಟ್ಟರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಬರೀ ಅಲ್ಪಸಂಖ್ಯಾತ ಇಲ್ಲಾ. ಇಲ್ಲಿವರೆಗೆ ಬೆಳಗಾವಿಗೆ ಅಲ್ಪಸಂಖ್ಯಾತರ ನಾಯಕರಲ್ಲಿ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ ನನಗೆ ಸ್ಥಾನ ನೀಡಬೇಕು ಎಂದು ತಿಳಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರ ಹೈಕಮಾಂಡ್ ಮೇಲೆ ಬಿಟ್ಟಿದ್ದು. ಅವರು ತಗೊಳ್ಳೊ ನಿರ್ಣಯಕ್ಕೆ ನಾವು ಬದ್ದ. ಬದಲಾವಣೆ ಬಗ್ಗೆ ಈವರೆಗೂ ನಮಗೆ ಮಾಹಿತಿ ಬಂದಿಲ್ಲ. ಸಿಎಲ್ಪಿ ಸಭೆ ಬಗ್ಗೆ ಇನ್ನೂ ವರೆಗೂ ಮಾಹಿತಿ ಬಂದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಇದೀನಿ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸತೀಶ್ ಅಣ್ಣಾ ನಮ್ಮ ನಾಯಕರು, ಅವರು ಆಗಬೇಕು ಅನ್ನೋದು ನಮ್ಮ ಇಚ್ಛೆ. ಆದರೂ ಹೈಕಮಾಂಡ್ ತಗೊಳ್ಳೋ ನಿರ್ಧಾರಕ್ಕೆ ನಾವು ಬದ್ಧ. ಸತೀಶ್ ಜಾರಕಿಹೊಳಿ ಅಂತವರು ಪಕ್ಷಕ್ಕಾಗಿ ದುಡಿಯೋರು ಬಹಳ ಕಮ್ಮಿ ಇದಾರೆ. ಅವರಿಗೆ ಸ್ಥಾನ ಕೊಟ್ರೆ ಪಕ್ಷ ಬೆಳೆಯುತ್ತೆ. ಡಿಕೆ ಶಿವಕುಮಾರ್ ಸಾಹೇಬರು ಪಕ್ಷಕ್ಕಾಗಿ ಬಹಳ ಕೆಲಸ ಮಾಡಿದಾರೆ ಎಂದರು.
ಸಿದ್ದರಾಮಯ್ಯ ಅವರು ಬರೀ ಅಹಿಂದ ನಾಯಕರು ಅಲ್ಲಾ, ಪೂರ್ಣ ರಾಜ್ಯದ ನಾಯಕರು ಎಂದು, ಸಿದ್ದರಾಮಯ್ಯ ರಾಜೀನಾಮೆ ಕೊಟ್ರೇ ಅಹಿಂದ ಮತಗಳ ಮೇಲೆ ಪರಿಣಾಮ ಆಗುತ್ತಾ ಎಂಬ ಪ್ರಶ್ನಗೆ ಶಾಸಕ ಆಸೀಪ್ ಸೇಠ್ ಅವರು ಉತ್ತರಿಸಿದರು.
ಸಿದ್ದರಾಮಯ್ಯ ಅವರ ಆಡಳಿತ ಕಾರ್ಯವೈಖರಿ ನಾವು ನೋಡಿದ್ದೇವೆ. ಅವರು ಒಬ್ಬ ಮಾಸ್ ಲೀಡರ್ ಇದಾರೆ. ಪೂರ್ಣ ರಾಜ್ಯದ ಎಲ್ಲಾ ಜನಾಂಗದ ನಾಯಕರು. ಡಿಕೆ ಶಿವಕುಮಾರ್ ಕೂಡ ಒಬ್ಬ ಮಾಸ್ ಲೀಡರ್ ಇದಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಹೇಳಿದರು.
Laxmi News 24×7