ಚಿಕ್ಕಮಗಳೂರು: ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಲು ತೋರಿರುವ ಮುತ್ಸದ್ದಿತನ ಮೆಚ್ಚಬೇಕು ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.
ಬಾಳೆಹೊನ್ನೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, 2023ರಲ್ಲಿ ಕಾಂಗ್ರೆಸ್ (Congress) ಭರ್ಜರಿ ಗೆಲುವು ಸಾಧಿಸಿತ್ತು. ಅಧ್ಯಕ್ಷರು ಸಿಎಂ ಆಗೋದು ವಾಡಿಕೆ. ಹೈಕಮಾಂಡ್ ಅನುಭವಿ ಸಿದ್ದರಾಮಯ್ಯನವರಿಗೆ ಮೊದಲ ಅವಕಾಶ ನೀಡಿತ್ತು. 5 ವರ್ಷದಲ್ಲಿ ಇಬ್ಬರು ಎರಡೂವರೆ ವರ್ಷ ಅಂತ ನಿರ್ಣಯ ಮಾಡಿದ್ರು. ಡಿಕೆಶಿ ತಾಳ್ಮೆ-ಸಹನೆ ಕಳೆದುಕೊಳ್ಳದೆ ಗಂಗಾಧರ ಜಗ್ಗುರುಗಳ ಮೇಲೆ ನಂಬಿಕೆ ಇಟ್ಟಿದ್ದರು ಎಂದರು.
ಸಿದ್ದರಾಮಯ್ಯನವರು ಉದಾರ ಅಂತಕರಣದಿಂದ ಆ ಸ್ಥಾನ ಬಿಟ್ಟುಕೊಡುವ ಮೂಲಕ ತೋರಿರುವ ಮುತ್ಸದ್ದಿತನವನ್ನ ಎಲ್ಲರೂ ಮೆಚ್ಚಬೇಕು. ಡಿಕೆಶಿ ಸಿಎಂ ಆಗಿ ಒಳ್ಳೆಯ ಆಡಳಿತ ನಡೆಸಲಿ. ಜಾತಿ-ಧರ್ಮದ ಸಂಘರ್ಷಗಳ ಸಂದರ್ಭ ಬರಬಾರದು. ಎಲ್ಲಾ ಸಮುದಾಯದ ಜನರನ್ನ ಮೇಲೆತ್ತುವ ಕಾರ್ಯ ಆಗಬೇಕು. ಇತ್ತೀಚಿನ ದಿನಗಳಲ್ಲಿ ಸಂಘರ್ಷ ಹೆಚ್ಚಾಗಿದೆ.
ಯಾವುದೇ ಜಾತಿ-ಧರ್ಮ ಇರಲಿ ಸಮವಸ್ತ್ರ ಎಂದು ಶಾಲೆಯ ಶಿಸ್ತು ನಿಯಮವನ್ನ ಪರಿಪಾಲಿಸಿಕೊಂಡು ಬಂದ ದಿನಗಳಿದ್ದವು. ಇಂದು ಓದುವ ಮಕ್ಕಳಲ್ಲೂ ಜಾತಿಯ ಭಾವನೆ ಬೆಳೆಸುವ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಧರ್ಮಪೀಠಕ್ಕೂ ಇದರಿಂದ ಬಹಳ ನೋವಾಗಿದೆ, ಅದು ಆಗಬಾರದು.
ರಾಜ್ಯದ ಅಭಿವೃದ್ಧಿಗೆ ನಾವು ಬಹಳಷ್ಡು ಅಪೇಕ್ಷೆ ಇಟ್ಟಿದ್ದೇವೆ. ಪ್ರಯೋಜನ ಇಲ್ಲದ ಯೋಜನೆಯಿಂದ ಸರ್ಕಾರದ ಬೊಕ್ಕಸ ಬರಿದಾಗ್ತಿದೆ. ಡಿಕೆಶಿಯವರಿಗೆ ಗಟ್ಟಿ ನಿಲುವು ತಾಳುವ ಆತ್ಮಬಲ-ಶಕ್ತಿ ಬರಲಿ. ಸ್ವಪಕ್ಷ-ವಿಪಕ್ಷ ಎಲ್ಲರೂ ಒಳ್ಳೆಯ ಕೆಲಸ ಮಾಡಿದಾಗ ಬೆಂಬಲಿಸಿ. ಎಲ್ಲರ ಸಹಕಾರದಿಂದ ಡಿಕೆಶಿ ಆ ಕೆಲಸ ಮಾಡುತ್ತಾರೆ. ಎರಡೂವರೆ ವರ್ಷದ ಬಳಿಕವಾದರೂ ಇಂತಹ ಪ್ರಸಂಗ ಬಂದಿರುವುದು ಪರಮಾತ್ಮನ ಕೊಡುಗೆ ಎಂದರು.
Laxmi News 24×7