ಬೆಳಗಾವಿ: ಹೆಣ್ಣನ್ನು ಭೋಗದ ವಸ್ತು, ಸೌಂದರ್ಯದ ವಸ್ತುವಾಗಿ ಕಾಣುವ ಸಮಾಜದಿಂದ ಹೊರಬಂದು , ಅವಳು ನಮ್ಮ ಮನೆಯ ಹೆಣ್ಣುಮಗಳು ಎಂದು ನೋಡಬೇಕು. ಇಂದಿಗೂ ನಾವು ಅವಳಿಗೆ ಆತ್ಮರಕ್ಷಣೆಯ ಪಾಠ ಹೇಳುತ್ತಿದ್ದೇವೆಂದರೆ ಎಂಥ ಸಮಾಜದಲ್ಲಿ ಬದುಕುತ್ತಿದ್ದೇವೆಂದು ವ್ಯಥೆಯಾಗುತ್ತದೆ ಎಂದು ಹಿರಿಯ ನಟಿ ಉಮಾಶ್ರೀ ಕಳವಳ ವ್ಯಕ್ತಪಡಿಸಿದರು.
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ 2025-26ನೇ ಸಾಲಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಸಾಂಸ್ಕೃತಿಕ , ಎನ್ಎಸ್ಎಸ್, ಎನ್ಸಿಸಿ, ರೆಡ್ ಕ್ರಾಸ್ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದು, ಇದರಿಂದ ಬಹಳ ಅನಾಹುತವಾಗುತ್ತಿದೆ. ಬದುಕಿ ಬಾಳಬೇಕಾದ ಅದೆಷ್ಟೋ ಜೀವಗಳು ಸಾವಿನೊಂದಿಗೆ ಅಂತ್ಯವಾಗುತ್ತಿದ್ದು, ಇದನ್ನು ತಡೆಯಲು ವಿದ್ಯಾರ್ಥಿಗಳು ಕಲೆ, ಸಂಸ್ಕೃತಿ ಗೌರವಿಸಿ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿ, ಇಂದು ಮನುಷ್ಯನನ್ನು ಯಂತ್ರಗಳು ಮೀರಿಸುತ್ತಿವೆ. ಆದರೆ ಯಂತ್ರಗಳನ್ನು ಮೀರಿ ಮನುಷ್ಯ ಬದುಕಬೇಕಿದೆ. ಅರ್ಹತೆ ಮತ್ತು ಪ್ರಾಮಾಣಿಕತೆ ಎರಡೂ ವಿದ್ಯಾರ್ಥಿಗಳಲ್ಲಿ ಇರಬೇಕು. ಪದವಿ ಜತೆಗೆ ಕೌಶಲವನ್ನುಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಲಸಚಿವರಾದ ಸಂತೋಷ ಕಾಮಗೌಡ, ಡಾ.ಮೈಜೂದ್ದಿನ್ ಮುತುವಲಿ, ವಿದ್ಯಾರ್ಥಿ ಒಕ್ಕೂಟದ ನಾಗಲಿಂಗ ಕಂಬಾರ, ಮೇಘಾ ಪಾಟೀಲ ಇತರರಿದ್ದರು.
ಪ್ರಾಚಾರ್ಯ ಪ್ರೊ.ಎಸ್.ಸಿ.ಪಾಟೀಲ ವರದಿ ವಾಚಿಸಿದರು. ಉಪಪ್ರಾಚಾರ್ಯ ಡಾ.ಅರ್ಜುನ ಜಂಬಗಿ ಸ್ವಾಗತಿಸಿದರು. ಡಾ. ಪ್ರೀತಿ ಪದಪ್ಪಗೋಳ ನಿರೂಪಿಸಿದರು. ಡಾ.ಪಿ.ನಾಗರಾಜ ಪರಿಚಯಿಸಿದರು. ಡಾ.ಲಾವಣ್ಯ ಗುಂಜಾಳ ವಂದಿಸಿದರು.
Laxmi News 24×7