ಮೈಸೂರು: ಕಾಮಗಾರಿ ವೀಕ್ಷಣೆ ಮಾಡಲು ಹೋಗಿದ್ದಾಗ ನೀರು ಕೊಡಲು ಬಂದ ಅಧಿಕಾರಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಏ ಇವನ್ಯಾವನೋ ಬಿಸಿಲಲ್ಲಿ ಎಳನೀರು ತರಬೇಕಲ್ವಾ ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮೈಸೂರು ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಎಂಜಿನಿಯರ್ ಒಬ್ಬರು ನೀರು ಕೊಡಲು ಬಂದಿದ್ದು, ಆಗ ಸಿಎಂ ಏ ಜ್ಯೂಸ್ ಇಲ್ವೇನಯ್ಯ ಎಂದು ಕೇಳಿದ್ದಾರೆ. ಏ ಇವನ್ಯಾವನೋ ಬಿಸಿಲಲ್ಲಿ ಎಳನೀರು ತರಬೇಕಲ್ವಾ ಎಂದು ಗರಂ ಆಗಿದ್ದಾರೆ. ಜ್ಯೂಸ್ ಇಲ್ಲದ್ದಕ್ಕೆ ಕೊನೆಗೆ ಸಿಎಂ ನೀರನ್ನು ಕುಡಿಯದೇ ಹಾಗೇ ಮುಂದೆ ಸಾಗಿದ್ದಾರೆ. ಅಧಿಕಾರಿಗಳು ಕಾಮಗಾರಿ ವೀಕ್ಷಣೆಯ ಮುಂದಿನ ಸ್ಥಳದಲ್ಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಬೆಳಿಗ್ಗೆ 11 ಗಂಟೆಯಿಂದ ಸಿಎಂ ಮೈಸೂರು ಸಿಟಿ ರೌಂಡ್ಸ್ ನಡೆಸುತ್ತಿದ್ದು, ನಗರದಲ್ಲಿ ಹಲವೆಡೆ ನಡೆಯುತ್ತಿರುವ ಯು.ಜಿ ಕೇಬಲಿಂಗ್, ವೈಟ್ ಟಾಪಿಂಗ್, ಬಿ ಮಹಾರಾಣಿ ಕಾಲೇಜು ಕಾಮಗಾರಿ ಹಾಗೂ ಹೊಸ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಎಂಗೆ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ.
Laxmi News 24×7