ಹುಕ್ಕೇರಿ: ಬಿರು ಬಿಸಿಲಿಗೆ ತತ್ತರಿಸಿರುವ ತಾಲೂಕಿನ ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಗ್ರಾಮಾಡಳಿತ ಕ್ರಮ ಕೈಗೊಳ್ಳಬೇಕು. ನೀರಿನ ಕೊರತೆಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಾಸಕ ನಿಖಿಲ ಕತ್ತಿ ಎಚ್ಚರಿಸಿದರು.
ಸ್ಥಳೀಯ ತಾಪಂ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಣಗಲಾ ಭಾಗದ ಶಿಪ್ಪೂರ, ಹಡಲಗಾ, ನೇರಲಿ ಆಶ್ರ್ರಯ ಕಾಲನಿ, ಹುಕ್ಕೇರಿ ಪೂರ್ವಭಾಗದ ಹುಲ್ಲೋಳಿ ಹಟ್ಟಿ, ರಕ್ಷಿ ಮೊದಲಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು.
ತಾಲೂಕು ಆಡಳಿತ ಅಂಥ ಗ್ರಾಮಗಳನ್ನು ಗುರುತಿಸಿ, ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಂತೋಷಗೌಡ ಪಾಟೀಲ ಬಳಿ ತೊಂದರೆ ತಿಳಿಸಿದಾಗ ಬರಿ ಸಬೂಬು ಹೇಳುತ್ತಾರೆ, ಹೊರತು ಯಾವುದೇ ಕೆಲಸ ಮಾಡುವುದಿಲ್ಲ. ಈ ವರ್ತನೆ ಮುಂದುವರಿದಲ್ಲಿ ಕ್ರಮ ಕೈಗೊಳುವುದಾಗಿ ಎಚ್ಚರಿಸಿದರು.
ಕಮತನೂರ ಪಂಚಾಯಿತಿ ವಾಟರ್ ಮನ್ ಸರಿಯಾಗಿ ನೀರು ಬಿಡುತ್ತಿಲ್ಲ ಎಂಬ ದೂರು ಕೇಳಿಬಂದಿದ್ದು, ಕ್ರಮವಹಿಸುವಂತೆ ತಾಪಂ ಇಒ ಟಿ.ಆರ್.ಮಲ್ಲಾಡದ ಅವರಿಗೆ ಸೂಚಿಸಿದರು.
ಹಿರಣ್ಯಕೇಶಿ ನದಿ ಬತ್ತಿರುವುದರಿಂದ ಕಣಗಲಾ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸಮಸ್ಯೆಯಾಗಿದೆ. ಅದಕ್ಕಾಗಿ ಮಹಾರಾಷ್ಟ್ರದ ಚಿತ್ರಿ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲು ಕೊಲ್ಲಾಪುರ ಜಿಲ್ಲಾಡಳಿತ ಮತ್ತು ಆ ರಾಜ್ಯದ ನೀರಾವರಿ ಸಚಿವರ ಜತೆಗೆ ಚರ್ಚಿಸಿ, ಶೀಘ್ರ ನೀರನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದರು.
ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಲೂಕು ಪಂಚಾಯಿತಿ ಇಒ ಟಿ.ಆರ್.ಮಲ್ಲಾಡದ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಸುನೀಲ ನೇರಲಿ, ಪ್ರಕಾಶ ಗಾವಡಿ, ಅಡಿವೆಪ್ಪ ಕಮತಿ, ಲಕ್ಷ್ಮಣ ಹೂಲಿ, ಪ್ರವೀಣ ಮುನ್ನೋಳಿ ಇತರರಿದ್ದರು.