ನವದೆಹಲಿ: ರಾಜ್ಯದಲ್ಲಿ ಸಿಎಂ ಕುರ್ಚಿ ತಿಕ್ಕಾಟದ ಮಧ್ಯೆ ಶಾಸಕರ ಮಿನಿಸ್ಟರ್ ಪಟ್ಟದಾಸೆ ಜೋರಾಗಿದೆ. ಹಿರಿಯ ಶಾಸಕರ ದಂಡು ಸಚಿವ ಸಂಪುಟ ಪುನರ್ ರಚನೆ ಆಗಬೇಕು ಎಂದು ಪಟ್ಟು ಹಿಡಿದು ದೆಹಲಿಯಲ್ಲಿ ಠಿಕಾಣಿ ಹೂಡಿದೆ.
ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಸೇರಿ ಹಲವು ಶಾಸಕರು ಈಗಾಗಲೇ ದೆಹಲಿಯಲ್ಲಿದ್ದು, ಇನ್ನೂ ಆರೇಳು ಶಾಸಕರು ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿಯಾಗಿದ್ದಾರೆ. 3 ದಿನ ದೆಹಲಿಯಲ್ಲೇ ಉಳಿದು, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ಸುರ್ಜೆವಾಲ ಭೇಟಿಗೆ ಪ್ಲ್ಯಾನ್ ಮಾಡಿದ್ದಾರೆ.
ಎರಡೂವರೆ ವರ್ಷದ ಬಳಿಕ ಸಂಪುಟ ಪುನರ್ ರಚನೆ ಭರವಸೆ ನೀಡಲಾಗಿತ್ತು. ಆದರೀಗ 3 ವರ್ಷ ಆಗ್ತಿದೆ. ಕೆಲವೇ ಕೆಲವು ಸಚಿವರನ್ನು ಉಳಿಸಿಕೊಂಡು, ಬಹುತೇಕ ಎಲ್ಲ ಸಚಿವರನ್ನು ಬದಲಿಸಬೇಕು ಎಂದು ವರಿಷ್ಠರ ಎದುರು ಹಕ್ಕೊತ್ತಾಯ ಮಾಡಲು ಮುಂದಾಗಿದ್ದಾರೆ. ಮೇ 15ರೊಳಗೆ ಕ್ಯಾಬಿನೆಟ್ ಪುನಾರಚನೆಗೆ ಒತ್ತಾಯಿಸಿದ್ದಾರೆ.
ಇನ್ನು ಖರ್ಗೆ ಭೇಟಿ ಬಳಿಕ ಮಾತನಾಡಿದ ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸಚಿವ ಸಂಪುಟ ಪುನರ್ ರಚನೆ ಕುರಿತು ಚರ್ಚೆ ಮಾಡಿದ್ದೇವೆ. ಸಹಾನುಭೂತಿಯಿಂದ ನಮ್ಮ ಮನವಿ ಕೇಳಿದ್ದಾರೆ. ಅವರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಮ್ಮ ಮನವಿ ನಾವು ಮಾಡಿದ್ದೇವೆ. ಸಿಎಂ ಬದಲಾವಣೆ ಕುರಿತು ನಾವು ಯಾವುದೇ ಚರ್ಚೆ ಮಾಡಿಲ್ಲ. ನಾಲ್ಕು ಗೋಡೆಗಳ ನಡುವೆ ಈ ವಿಷಯ ಇದೆ. ಖರ್ಗೆಯವರು ನಮಗೆ ಭರವಸೆ ಕೊಟ್ಟಿದ್ದಾರೆ. ಸಂಪುಟ ಪುನರ್ ರಚನೆ ಆಗುತ್ತೆ ಎಂಬ ವಿಶ್ವಾಸ ಇದೆ. ಸರ್ಕಾರ ಮೂರು ವರ್ಷ ತುಂಬುವ ಮುನ್ನ ಮಾಡಬಹುದು ಎಂದು ಭಾವಿಸಿದ್ದೇವೆ. ಯಾವ ಸಚಿವರ ಮೇಲೂ ಆರೋಪ ಮಾಡಿಲ್ಲ. ನಮಗೂ ಅವಕಾಶ ಬೇಕು ಅಂತಾ ಕೇಳಿದ್ದೇವೆ. ಸಿಎಂ ಬದಲಾವಣೆ ಬಗ್ಗೆ ನಾವು ಮಾತನಾಡಿಲ್ಲ. ನಾಡಿದ್ದು ವೇಣುಗೋಪಾಲ್, ಮತ್ತು ಸುರ್ಜೆವಾಲಾ ಅವರನ್ನು ಭೇಟಿ ಮಾಡಲಿದ್ದೇವೆ ಎಂದರು.
ಸಭೆ ಬಳಿಕ ಅಶೋಕ್ ಪಟ್ಟಣ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ನಮ್ಮ ಅಹವಾಲು ತಿಳಿಸಿದ್ದೇವೆ. ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಚರ್ಚೆ ನಡೆಸುವ ಭರವಸೆ ನೀಡಿದ್ದಾರೆ. ಸೂಕ್ತ ಸಹಾಯ ಮಾಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಮುಂದಿನ ತಿಂಗಳು 15ರೊಳಗೆ ಆಗಬಹುದು ಎಂದು ನಾವು ನಿರೀಕ್ಷಿಸಿದ್ದೇವೆ. ನಮಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ. ಡಿ.ಕೆ ಶಿವಕುಮಾರ್ ಅವರಿಗೆ ನಾವೇ ವರದಿ ನೀಡುತ್ತೇವೆ. ನಾವು ಯಾವುದೇ ತಪ್ಪು ಮಾಡಿಲ್ಲ, ನಮಗೆ ನೋಟಿಸ್ ನೀಡಲು ಸಾಧ್ಯವಿಲ್ಲ. ನಾವು ತಪ್ಪು ಮಾಡಿಲ್ಲ, ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳಬೇಕು. ಒಟ್ಟಿನಲ್ಲಿ ಸಚಿವ ಸಂಪುಟ ಪುನರ್ ರಚನೆ ಆಗಬೇಕು ಎನ್ನುವುದಷ್ಟೇ ನಮ್ಮ ಒತ್ತಾಯ. ನಾಡಿದ್ದು ವೇಣುಗೋಪಾಲ ಸುರ್ಜೆವಾಲಾ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ
ದೆಹಲಿಗೆ ಹೋದ ಶಾಸಕರಿಗೆ ಪಕ್ಷದ ಚೌಕಟ್ಟು ಮೀರದಂತೆ ಡಿಸಿಎಂ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ. ಬಹಿರಂಗವಾಗಿ ಸಚಿವಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಅದ್ರೆ ಡಿಸೈಡ್ ಮಾಡೋದು ಹೈಕಮಾಂಡ್ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
Laxmi News 24×7