ಬೀದರ್: ಇಂದು ವರ್ಷದ ಮೊದಲ ಚಂದ್ರಗ್ರಹಣ ಹಿನ್ನೆಲೆ ಬೀದರ್ ಜಿಲ್ಲೆಯ ಪ್ರಮುಖ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿದೆ.
ಬೀದರ್ ಹೊರವಲಯದಲ್ಲಿರುವ ದಕ್ಷಿಣ ಭಾರತದ ಏಕೈಕ ಝರಣಿ ನರಸಿಂಹಸ್ವಾಮಿ ಗುಹಾಂತರ ದೇವಾಲಯದ ಬಾಗಿಲು ಬಂದ್ ಮಾಡಿ, ಪ್ರಧಾನ ಅರ್ಚಕರು ಬೀಗ ಹಾಕಿದ್ದಾರೆ. ಒಂದು ಕಿ.ಮೀ ದೂರ ಎದೆಮಟ್ಟದ ನೀರಿನಲ್ಲಿ ನಡೆದುಕೊಂಡು ಹೋಗಿ ನರಸಿಂಹಸ್ವಾಮಿ ದೇವರ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ಬ್ರೇಕ್ ಹಾಕಿ, ಚಂದ್ರಗ್ರಹಣದ ಸ್ಪರ್ಶ ತಟ್ಟದಂತೆ ದೇವರಿಗೆ ಅಷ್ಟದಿಗ್ಬಂಧನ ಹಾಕಲಾಗಿದೆ.
ದೇವರ ವಿಗ್ರಹದ ಮೂರ್ತಿ ಮೇಲೆ ತುಳಸಿ ದಳಗಳನ್ನಿಟ್ಟು ದಿಗ್ಬಂಧನ ಹಾಕಿದ್ದು, ಜೊತೆಗೆ ಐತಿಹಾಸಿಕ ಪಾಪನಾಶ ಶಿವಲಿಂಗ ದೇವಾಲಯ, ಹೊನ್ನಿಕೆರಿ ಸಿದ್ದೇಶ್ವರ ದೇವಾಲಯ, ಖಾನಾಪುರ ಮೈಲಾರ ಮಲ್ಲಣ್ಣ ಚಾಂಗ್ಲೇರಾ, ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಪ್ರಮುಖ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿದೆ.
ಸಂಜೆ 7 ಗಂಟೆಗೆ ದೇವಾಲಯಗಳ ಬಾಗಿಲನ್ನು ಅರ್ಚಕರು ಓಪನ್ ಮಾಡಲಿದ್ದು, ಗ್ರಹಣ ಮೋಕ್ಷ ನಂತರ ಗೋಮೂತ್ರ ಸಿಂಪಡಿಸಿ ದೇವಾಲಯದ ಆವರಣ, ಗರ್ಭಗುಡಿ ಶುದ್ಧೀಕರಣ ಕಾರ್ಯಮಾಡಿ ಮಹಾಪೂಜೆ, ಮಹಾಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಸುಮಾರು ಒಂದು ಗಂಟೆಗಳ ಶುದ್ಧೀಕರಣ ಹಾಗೂ ಮಹಾಪೂಜೆ ನಡೆಯಲಿದ್ದು, ಪೂಜೆ-ವಿಧಿವಿಧಾನಗಳ ನಂತರ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
Laxmi News 24×7