ಮೂಡಲಗಿ: ರಾಜ್ಯ ಸರ್ಕಾರದಿಂದ ಯಾವುದೇ ಹೊಸ ನೇಮಕಾತಿ ನಡೆಯದ ಕಾರಣ ಯುವಜನತೆಯ ವಯೋಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ದಂಗೆ ಎದ್ದಿದ್ದಾರೆ. ರಾಜ್ಯದಲ್ಲಿ ಸುಮಾರು 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಕೂಡ ಸರ್ಕಾರ ನೇಮಕಾತಿ ಮಾಡುವಲ್ಲಿ ನಿರಾಸಕ್ತಿ ವಹಿಸಿದೆ. ಕೇವಲ ಮುಖ್ಯಮಂತ್ರಿ ಕುರ್ಚಿ ಕಾಳಗ ನಡೆದಿದೆ ಹೊರತು ಬೇರೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ರಾಜ್ಯದ ಯುವಜನತೆ ಆಕ್ರೋಶಗೊಂಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕಿಡಿಕಾರಿದರು.
ಬುಧವಾರ ಫೆ-25 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಒಂದೂ ನೇಮಕಾತಿ ಆರಂಭಿಸದೆ ಉದ್ಯೋಗಾಕಾಂಕ್ಷಿಗಳಿಗೆ ದ್ರೋಹ ಬಗೆದಿದ್ದಾರೆ. ಈಗಾಗಲೇ ಸರ್ಕಾರದ ವಿವಿಧ ಪ್ರಮುಖ ಇಲಾಖೆಗಳಾದ ಶಿಕ್ಷಣ ಇಲಾಖೆ 79694, ಆರೋಗ್ಯ/ವೈದ್ಯಕೀಯ ಶಿಕ್ಷಣ 37572, ಒಳಾಡಳಿತ ಇಲಾಖೆ 28188, ಉನ್ನತ ಶಿಕ್ಷಣ ಇಲಾಖೆ 13599, ಪಶುಸಂಗೋಪನಾ ಇಲಾಖೆ 11020, ಕಂದಾಯ ಇಲಾಖೆ 10867, ಗ್ರಾಮೀಣಾಭಿವೃದ್ಧಿ/ಪಂಚಾಯತ್ ರಾಜ್ 10504, ಪರಿಶಿಷ್ಟ ಜಾತಿಗಳ ಕಲ್ಯಾಣ 9646, ಹಿಂದುಳಿದ ವರ್ಗಗಳ ಕಲ್ಯಾಣ 8525, ಆರ್ಥಿಕ ಇಲಾಖೆ 7668, ಕೃಷಿ ಇಲಾಖೆ 6876, ಅರಣ್ಯ ಇಲಾಖೆ 6478, ಸಿಬ್ಬಂದಿ / ಆಡಳಿತ ಸುಧಾರಣೆ 6190, ಸಹಕಾರ ಇಲಾಖೆ 4726, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 4972, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 3391 ಹೀಗೆ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಇದು ಸರ್ಕಾರದ ಆಡಳಿತಾತ್ಮಕ ವೈಫಲ್ಯವಲ್ಲವೇ? ಎಂದು ಟೀಕಿಸಿದರು.
ಮುಖ್ಯಮಂತ್ರಿಗಳೇ, 1000 ದಿನಗಳ ಸಂಭ್ರಮ ನಿಮಗಿರಲಿ, ಆದರೆ ಕೆಲಸವಿಲ್ಲದೆ ಕಂಗೆಟ್ಟಿರುವ ಯುವಕರಿಗೆ ಏನು ಉತ್ತರ ನೀಡುತ್ತೀರಿ? 40,000 ನೇಮಕಾತಿಯ ಸುಳ್ಳು ಲೆಕ್ಕ ಬಿಡಿ, ಎಷ್ಟು ಜನರಿಗೆ ನೇಮಕಾತಿ ಪತ್ರ ಸಿಕ್ಕಿದೆ ಎಂಬ ಶ್ವೇತಪತ್ರ ಹೊರಡಿಸಿ. ಹಕ್ಕು ಕೇಳಿದವರ ಮೇಲೆ ಲಾಠಿ ಬೀಸುವುದು ನಿಮ್ಮ ‘ಸರ್ವಾಧಿಕಾರಿ’ ಧೋರಣೆಯಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವಜನರು ತಾಳ್ಮೆ ಮೀರಿ ದಂಗೆ ಏಳುವ ಮುನ್ನ ನೇಮಕಾತಿ ಅಧಿಸೂಚನೆ ಹೊರಡಿಸದಿದ್ದರೆ ರಾಜ್ಯಾದ್ಯಂತ ಯುವಜನತೆಯ ಆಕ್ರೋಶಕ್ಕೆ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Laxmi News 24×7