Breaking News

ಸಿದ್ದರಾಮಯ್ಯ ಇಳಿಸಲು ಹೈಕಮಾಂಡ್‌ಗೆ ಕೊಟ್ಟ ಭರವಸೆಯಂತೆ ಟೌನ್‌ಶಿಪ್‌ – ಡಿಕೆಶಿ ವಿರುದ್ಧ ಹೆಚ್‌ಡಿಡಿ ಸ್ಫೋಟಕ ಆರೋಪ

Spread the love

ಬೆಂಗಳೂರು: ಸಿದ್ದರಾಮಯ್ಯ ಇಳಿಸಲು ಹೈಕಮಾಂಡ್‌ಗೆ ಕೊಟ್ಟ ಭರವಸೆ ಈಡೇರಿಸಲು ಸಿಎಂ ಡಿಕೆ ಶಿವಕುಮಾರ್‌ ಬಿಡದಿ ಟೌನ್‌ಶಿಪ್‌ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು  ಸ್ಫೋಟಕ ಆರೋಪ ಮಾಡಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್  ಯೋಜನೆಗೆ ಸಂಬಂಧಿಸಿದಂತೆ ರೈತರ ಮೇಲಿನ ದೌರ್ಜನ್ಯ ಹಾಗೂ ಜೆಎಂಸಿ ಸರ್ವೆ ವಿವಾದ ಈಗ ರಾಜಕೀಯವಾಗಿ ಭಾರೀ ಸ್ಫೋಟಗೊಂಡಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇಂದು ಜೆಪಿ ಭವನದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಡಿಕೆಶಿ ವಿರುದ್ಧ ಅತ್ಯಂತ ಗಂಭೀರ ಹಾಗೂ ಸ್ಫೋಟಕ ರಾಜಕೀಯ ಆರೋಪಗಳನ್ನು ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಮತ್ತು ಕಾಂಗ್ರೆಸ್ ಹೈಕಮಾಂಡ್ ಅನ್ನು ಒಲಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಏನು ಆಶ್ವಾಸನೆ ಕೊಟ್ಟಿದ್ದಾರೋ, ಆ ಚುನಾವಣಾ ಫಂಡ್ ಭರವಸೆಯನ್ನು ಈಡೇರಿಸಿಕೊಳ್ಳಲು ಬಿಡದಿಯ 7 ಸಾವಿರ ಎಕರೆ ಜಾಗವನ್ನು ನಿವೇಶನ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಡಿಕೆಶಿಗೆ ನಾನು ಹೇಳ್ತೀನಿ, ಸಿದ್ದರಾಮಯ್ಯನವರನ್ನು ತೆಗೆಯಲು ಹೈಕಮಾಂಡ್‌ಗೆ ಕೊಟ್ಟ ಆಶ್ವಾಸನೆ ಫುಲ್‌ಫಿಲ್ ಮಾಡಿಕೊಳ್ಳಲು ಬೇರೆ ಮಾರ್ಗ ಹುಡುಕಿಕೊಳ್ಳಿ, ಬಡ ರೈತರ  ಹೊಟ್ಟೆಯ ಮೇಲೆ ಹೊಡೆಯಬೇಡಿ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ  ಒಪ್ಪಿದ್ದಾರೆ ಎಂದು ಡಿಕೆಶಿ ಸುಳ್ಳು ಪ್ರಸ್ತಾಪ ಮಾಡುತ್ತಿದ್ದಾರೆ. ಅವರ ಚಾಕಚಕ್ಯತೆ ನನಗೆ ಗೊತ್ತಿದೆ ಎಂದು ನೇರ ವಾಗ್ದಾಳಿ ನಡೆಸಿದರು.

ಗಾಂಧಿ ಪ್ರತಿಮೆ ಮುಂದೆ ಧರಣಿ
ಬಿಡದಿ ಟೌನ್‌ಶಿಪ್ ಯೋಜನೆಯನ್ನು ತಕ್ಷಣವೇ ರದ್ದು ಮಾಡುವಂತೆ ಶಿವಕುಮಾರ್‌ ಅವರಿಗೆ 11 ಪುಟಗಳ ಸುದೀರ್ಘ ಪತ್ರ ಬರೆದಿರುವುದಾಗಿ ತಿಳಿಸಿದ ದೇವೇಗೌಡರು ಈ ಯೋಜನೆಯನ್ನು ಸರ್ಕಾರ ಕೈಬಿಡದಿದ್ದರೆ ನಾನು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ಕೂರಬೇಕಾಗುತ್ತದೆ. ಆ ಪರಿಸ್ಥಿತಿಗೆ ನನ್ನನ್ನು ತಳ್ಳಬೇಡಿ ಎಂದು ಎಚ್ಚರಿಸಿದರು. ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರೊಬ್ಬರು ಕೂಡ ಈ ಜಾಗಕ್ಕೆ ಭೇಟಿ ನೀಡಿ ಇಲ್ಲಿ ಯೋಜನೆ ಮಾಡಬಾರದು ಎಂದು ಹೇಳಿದ್ದಾರೆ ಇದನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳಬಾರದು ಎಂದರು.

ಅಂಕಿ-ಅಂಶ ಬಿಡುಗಡೆ
ಯೋಜನಾ ವ್ಯಾಪ್ತಿಯಲ್ಲಿರುವ ಸಣ್ಣ ಹಿಡುವಳಿದಾರರ ಪರ ಬ್ಯಾಟ್ ಬೀಸಿದ ಅವರು, ಭೂಮಿ ಕಳೆದುಕೊಳ್ಳುತ್ತಿರುವ ರೈತರ ವಿವರ ನೀಡಿದರು. 2,555 ರೈತರರಿಗೆ 1 ರಿಂದ 5 ಗುಂಟೆ ಇದ್ದರೆ 1,653 ರೈತರಿಗೆ 10 ರಿಂದ 20 ಗುಂಟೆ ಜಾಗವಿದೆ. 2,257 ರೈತರಿಗೆ 20 ರಿಂದ 40 ಗುಂಟೆ ಇದ್ದರೆ 1,342 ರೈತರಿಗೆ 1 ರಿಂದ 2 ಎಕರೆ ಜಾಗವಿದೆ ಎಂದು ತಿಳಿಸಿದರು.

ಇಷ್ಟೊಂದು ಬಡ ರೈತರನ್ನು ನೀವು ಎಲ್ಲಿಗೆ ಕಳುಹಿಸುತ್ತೀರಾ? ಭೂಮಿ ಕೊಡಲು ಒಪ್ಪಿರುವವರು ಹಳ್ಳಿಯಲ್ಲಿಲ್ಲ, ಬೆಂಗಳೂರಿನಲ್ಲಿದ್ದಾರೆ. ಅವರದ್ದು ಕೇವಲ 17 ಎಕರೆ ಜಾಗ ಮಾತ್ರ. ಆದರೆ 500 ಎಕರೆ ಇರೋ ನಿಜವಾದ ರೈತರ ಜಾಗಕ್ಕೆ ಇವರು ಹೋಗೇ ಇಲ್ಲ. ಉಳಿದಿದ್ದು ಸರ್ಕಾರಿ ಗೋಮಾಳ. ಅಲ್ಲಿ ಹೆಣ್ಣುಮಕ್ಕಳು ಹಸು ಸಾಕಿ, ದಿನಕ್ಕೆ 60 ಸಾವಿರ ಲೀಟರ್ ಹಾಲು ಕರೆದು ಜೀವನ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಈ ಯೋಜನೆ ಯಾಕೆ ಬೇಕು?
ಸರ್ಕಾರ ಈಗಾಗಲೇ ಮಾಡಿರುವ ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸಿದ ಸುಮಾರು 40 ಸಾವಿರ ನಿವೇಶನಗಳನ್ನು ಕೊಳ್ಳುವವರೇ ಇಲ್ಲದೆ ಖಾಲಿ ಬಿದ್ದಿವೆ. ಸಚಿವ ಜಾರಕಿಹೋಳಿಯವರೇ ಬಿಡಿಎ ಸೈಟುಗಳು ಖಾಲಿ ಇವೆ ಎನ್ನುತ್ತಾರೆ. ಬೇರೆ ಕಡೆ ಜಾಗ ಇದ್ದರೂ ಬಿಡದಿಯ ಈ ಜಮೀನಿನ ಮೇಲೆಯೇ ಕಣ್ಣು ಯಾಕೆ? ಎಂದು ಪ್ರಶ್ನಿಸಿದರು.

ಎಫ್‌ಐಆರ್‌ ವಾಪಸ್‌ ಪಡೆಯಿರಿ
ನಿನ್ನೆ ಬಿಡದಿಯಲ್ಲಿ ನಡೆದ ಘಟನೆಯಿಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನಸ್ಸಿಗೆ ನೋವು ಮಾಡಿಕೊಂಡಿದ್ದು, ಶಾಂತಿಯುತ ಹೋರಾಟಕ್ಕೆ ಕರೆ ನೀಡಿದ್ದಾರೆ. ಇತ್ತ ನಿಖಿಲ್ ಕುಮಾರಸ್ವಾಮಿ ಬರ ಅಧ್ಯಯನದಲ್ಲಿದ್ದು, ರೈತರ ಮೇಲಿನ ಎಫ್‌ಐಆರ್ ರದ್ದು ಮಾಡಲು ಒತ್ತಾಯಿಸಿದ್ದಾರೆ. ಪೊಲೀಸರಿಗೆ ಆಸ್ಪತ್ರೆಗೆ ದಾಖಲಾಗುವಂತಹ ದೊಡ್ಡ ಗಾಯಗಳೇನೂ ಆಗಿಲ್ಲ. ಮಹಿಳೆಯರ ನೋವನ್ನು ಅರ್ಥ ಮಾಡಿಕೊಳ್ಳಿ. ರೈತರ ಮೇಲೆ ಎಫ್‌ಐಆರ್ ಹಾಕಿ ಅರೆಸ್ಟ್ ಮಾಡಿದರೆ ಹಾಲು ಕರೆಯುವವರು ಯಾರು? ಕೂಡಲೇ ಎಫ್‌ಐಆರ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಸದ್ಯಕ್ಕೆ ಜಿಲ್ಲಾಡಳಿತ ಸರ್ವೇ ನಿಲ್ಲಿಸಿರುವುದನ್ನು ಸ್ವಾಗತಿಸಿದ ದೇವೇಗೌಡರು, ಸರ್ವೆಯನ್ನು ಕೇವಲ ತಾತ್ಕಾಲಿಕವಾಗಿ ನಿಲ್ಲಿಸುವುದಲ್ಲ, ಬಿಡದಿ ಟೌನ್‌ಶಿಪ್ ಯೋಜನೆಯನ್ನೇ ಸಂಪೂರ್ಣವಾಗಿ ಕೈಬಿಡಬೇಕು. ನಮ್ಮದು ಪ್ರಾದೇಶಿಕ ಪಕ್ಷ, ನಾವು ರೈತರ ಪರ ಇರುತ್ತೇವೆ ಮತ್ತು ಈ ಹೋರಾಟಕ್ಕೆ ಬಿಜೆಪಿಯ ಸಂಪೂರ್ಣ ಬೆಂಬಲವೂ ಇದೆ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಬಿಡದಿ ಟೌನ್‌ಶಿಪ್ ಹೋರಾಟಗಾರರ ಮೇಲಿನ FIR ವಾಪಸ್ ಪಡೆಯಬೇಕು: ನಿಖಿಲ್ ಆಗ್ರಹ

Spread the loveಬೆಂಗಳೂರು: ಬಿಡದಿ ಟೌನ್‌ಶಿಪ್  ಹೋರಾಟಗಾರರ ಮೇಲೆ ಸರ್ಕಾರ ಹಾಕಿರೋ FIR ಕೂಡಲೇ ರದ್ದು ಮಾಡಬೇಕು ಎಂದು ಜೆಡಿಎಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ