ಆನೇಕಲ್ : ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಎಲ್ಲರೂ ನೀಡಿದ ಸಹಕಾರ ಕಾರಣ ಎಂದು ಹೆನ್ನಾಗರ ಗ್ರಾಪಂ ಅಧ್ಯಕ್ಷ ಕೆ.ವಿನಯ್ ಹೇಳಿದರು.
ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ಆವರಣದಲ್ಲಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಅಧಿಕಾರದ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕಾವೇರಿ ಕುಡಿಯುವ ನೀರಿನ ಯೋಜನೆ ಮೂಲಕ ಪ್ರತಿ ಮನೆಗೂ ಕಾವೇರಿ ನೀರು ತಲುಪಿಸುವ ಮಹತ್ತರದ ಕಾಮಗಾರಿ ಮಾಡಿರುವುದು ಖುಷಿ ತಂದಿದೆ. ಇದರ ಜತೆಗೆ ಕೆರೆ ಅಭಿವೃದ್ಧಿ, ಗ್ರಂಥಾಲಯ, ಆಸ್ಪತ್ರೆ, ಪಾರ್ಕ್ ಅಭಿವೃದ್ಧಿ ಸೇರಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದರು.
ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆ ಕೊಂಡೊಯ್ಯುವಲ್ಲಿ ಎಲ್ಲರ ಸಹಕಾರವು ಇದ್ದು, ಮುಂದಿನ ದಿನಗಳಲ್ಲಿ ಪಂಚಾಯಿತಿ ನಗರಸಭೆ ಅಥವಾ ಮಿನಿ ಜಿಬಿಎ ಆಗುವ ಸಾಧ್ಯತೆ ಇದೆ ಎಂದರು.
ಮಾಜಿ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ ಮಾತನಾಡಿ, ಏಳೂವರೆ ವರ್ಷ ಅಧ್ಯಕ್ಷನಾಗಿ ಹಾಗೂ ಗ್ರಾಪಂ ಸದಸ್ಯನಾಗಿ ಹಲವಾರು ಅಭಿವೃದ್ಧಿ ಕೆಲಸ ಮಾಡಿರುವುದು ಸಂತಸ ತಂದಿದೆ ಎಂದರು.
ಮಾಜಿ ಅಧ್ಯಕ್ಷೆ ಮುನಿರತ್ನಮ್ಮ ಮುನಿರಾಜು ಮಾತನಾಡಿ, ಗ್ರಾಪಂ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುವ ಮೂಲಕ ಮತದಾರರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ರಾಜ್ಯದಲ್ಲಿ ಯಾವುದೇ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರಿಗೆ ಹೈನುಗಾರಿಕೆ ಮಾಡಲು ರಾಸುಗಳನ್ನು ಉಚಿತವಾಗಿ ನೀಡಿರುವ ಪಂಚಾಯಿತಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿರುವ ಪಂಚಾಯಿತಿ ಹೆನ್ನಾಗರ ಮಾತ್ರ ಎಂದರು.
ಮಾಜಿ ಅಧ್ಯಕ್ಷರಾದ ಮಹೇಶ್, ರಾಮಸ್ವಾಮಿರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್, ಪಿಡಿಒ ಸಿದ್ದರಾಜು, ಕಾರ್ಯದರ್ಶಿ ಮುನಿರಾಜು ಇದ್ದರು.
Laxmi News 24×7