ಬೆಂಗಳೂರು: ಮಾದಕ ವ್ಯಸನ ನಿರ್ಮೂಲನೆಗೆ ಸರ್ಕಾರ ಬದ್ದವಾಗಿದೆ. ಪ್ರತಿ ಕಾಲೇಜಿನಲ್ಲಿ ಆ್ಯಂಟಿ ಡ್ರಗ್ಸ್ ಕಮಿಟಿ ರಚಿಸಬೇಕು ಎಂದು ಆದೇಶಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ದಿಶಾಭೋದ್ ಫೌಂಡೇಶನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ನಶಾಮುಕ್ತ ಭಾರತ, ನಶಾಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡ್ರಗ್ಸ್ ವಿರುದ್ಧ ಯಾವ ಕಾಲೇಜು ಕ್ರಮ ತೆಗೆದುಕೊಳ್ಳುವುದಿಲ್ಲವೊ, ಆ ಕಾಲೇಜಿನ ಮಾನ್ಯತೆಯನ್ನು ಹಿಂಪಡೆಯುವ ಕ್ರಮವಾಗಬೇಕು ಎಂದರು.
ಡ್ರಗ್ಸ್ ದಂಧೆಯು ಆಡಳಿತ ವ್ಯವಸ್ಥೆಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ದೊಡ್ಡ ಸವಾಲಾಗಿದೆ. ಯುವಕರು ಶಾಲಾ-ಕಾಲೇಜುಗಳಲ್ಲಿ ಮಾದಕ ವ್ಯಸನಗಳಿಂದ ತಮ್ಮ ಪ್ರತಿಭೆಯನ್ನು ಕಳೆದುಕೊಳ್ಳುತ್ತಿರುವುದು ಪೋಷಕರಿಗೆ ಆತಂಕ ತಂದಿದೆ ಎಂದರು.
ಡ್ರಗ್ಸ್ ಬಗ್ಗೆಯೇ ಅಧಿವೇಶನದಲ್ಲಿ ಗೃಹ ಇಲಾಖೆ ಅತಿಹೆಚ್ಚು ಪ್ರಶ್ನೆಗಳು ಬರುತ್ತವೆ. ಇದು ಅತಿದೊಡ್ಡ ಪಿಡುಗು, ಅತಿದೊಡ್ಡ ಸಮಸ್ಯೆಯಾಗಿದೆ ಎಂದರು.
ಕೆಲ ವರ್ಷಗಳ ಹಿಂದೆ ಪಂಜಾಬ್ನಲ್ಲಿ ಮನೆ ಮನೆಗಳಲ್ಲಿ ಡ್ರಗ್ಸ್ ಸಿಗುತಿತ್ತು. ಈಗ ತಹಬಂದಿಗೆ ಬಂದಿದೆ. ಕರ್ನಾಟಕವನ್ನು ಯಾವುದೇ ಕಾರಣಕ್ಕೆ ಡ್ರಗ್ಸ್ ವ್ಯಸನವಾಗಲು ಬಿಡುವುದಿಲ್ಲ ಎಂದರು.
ಬಸ್ಗಳ ಮೇಲೆ ನಶಾಮುಕ್ತ ಕರ್ನಾಟಕ, ನೋ ಸೇ ಟು ಡ್ರಗ್ಸ್ ಬರಹಗಳನ್ನು ಹಾಕುವಂತೆ ಸಾರಿಗೆ ಸಚಿವರಿಗೆ ತಿಳಿಸಿದ್ದೇನೆ ಎಂದರು.
ತಜ್ಞರ ಪ್ರಕಾರ ಹೈಡ್ರೋ ಗಾಂಜಾ ಸಾಮಾನ್ಯ ಡ್ರಗ್ಸ್ಗಿಂತ ಶೇ. 20ರಷ್ಟು ಪರಿಣಾಮಕಾರಿಯಾಗುತ್ತದೆ. ಪೆಡ್ಲರ್ಗಳಿಂದ ವಶಪಡಿಸಿಕೊಂಡಿದ್ದ ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ್ದೇವೆ. ವ್ಯಾಸಂಗಕ್ಕೆ ಬಂದು ಡ್ರಗ್ಸ್ ದಂಧೆಯಲ್ಲಿ ತೊಡಗುವ ವಿದೇಶಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಡ್ರಗ್ಸ್ ಪೆಡ್ಲರ್ಗಳಿಗೆ ಮನೆ ಬಾಡಿಗ್ಗೆೆ ನೀಡುವವರ ವಿರುದ್ಧ ಕ್ರಮ ತಡಗೆದುಕೊಳ್ಳಲಾಗುತ್ತಿದೆ. ಎಲ್ಲ ರೀತಿಯ ಕಠಿಣ ಕ್ರಮ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ ಎಂದರು.
ಡ್ರಗ್ಸ್ನಿಂದ ಜೀವ ಕಳೆದುಕೊಳ್ಳುವರ ಸಂಖ್ಯೆ ಹೆಚ್ಚು: ಸಚಿವ ದಿನೇಶ್ ಆತಂಕ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಗೆಳೆಯರ ಒತ್ತಾಯಕ್ಕೋ, ಚಿಕ್ಕವಯಸ್ಸಿನಲ್ಲಿನ ಕುತೂಹಲದಿಂದ ಪ್ರಾಂಭವಾಗುವ ಹವ್ಯಾಸ ನಂತರ ಅಡಿಕ್ಷನ್ ಆಗಿ ಬದಲಾಗುವುದು ಆತಂಕಕಾರಿ ಸಂಗತಿ ಎಂದರು.
ಡ್ರಗ್ಸ್ನಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ. ಕೇವಲ ಕಾನೂನು ರೂಪಿಸುವುದರಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ಜನಜಾಗೃತಿಯು ಬಹಳ ಮುಖ್ಯ. ಪೋಷಕರು ಮಕ್ಕಳ ಕುರಿತು ಗಮನಹರಿಸುವುದು ಮುಖ್ಯ. ಮಕ್ಕಳ ಚಲನವನದ ಬಗ್ಗೆ ಗಮನ ಇಟ್ಟಿರಬೇಕು ಎಂದರು.
ಅಂಗಾಂಗ ದಾನದಲ್ಲಿ 3ನೇ ಸ್ಥಾನದಲ್ಲಿದ್ದೇವೆ:
ಅಂಗಾಂಗ ದಾನದಲ್ಲಿ ನಾವು ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ಬಡಜನರಿಗೆ ಅನುಕೂಲ ಆಗಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಅಂಗಾಂಗ ದಾನ ಮಾಡಿದ ಕುಟುಂಬಕ್ಕೆ ಸ್ವಾತಂತ್ರ್ಯದಿನದ ಮುಖಮಂತ್ರಿಯಿಂದ ಸನ್ಮಾನ ಮಾಡುತ್ತಿದ್ದೇವೆ ಎಂದರು.
ಔಷಧ ದುರುಪಯೋಗ ತಡೆಯಲು ಸೂಕ್ತ ನಿಯಮ ರೂಪಿಸಿ, ಸದಾ ನಿಗಾ ಇಡುವ ಕೆಲಸ ಆರೋಗ್ಯ ಇಲಾಖೆ ಮಾಡುತ್ತಿದೆ. ಸುಸ್ಥಿರ ಸಮಾಜ ನಿರ್ಮಾಣಕ್ಕೆ ಇವೆಲ್ಲದರ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ಸಂಪತ್ರಾಜ್, ಶಾಸಕರಾದ ರಿಜ್ವಾನ್ ಅರ್ಷದ್, ಪ್ರಕಾಶ್ ಕೋಳಿವಾಡ, ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎನ್ಸಿಬಿ ಬೆಂಗಳೂರು ವಲಯ ನಿರ್ದೇಶಕರಾದ ಸಚಿನ್ ಘೋರ್ಪಡೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿಗಳಾದ ಡಾ. ಬಿ.ಸಿ.ಭಗವಾನ್, ದಿಶಾಭೋದ್ ಫೌಂಡೇಶನ್ ನಿರ್ದೇಶಕರಾದ ಡಾ. ಕೆ.ಹರಿತ ಮುಂತಾದವರು ಉಪಸ್ಥಿತರಿದ್ದರು.
Laxmi News 24×7