ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಮೂರನೇ ದಿನ ಬುಧವಾರವೂ ರೈತರು, ಆಶಾ ಕಾರ್ಯಕರ್ತೆಯರು, ಅತಿಥಿ ಶಿಕ್ಷಕರು ಸೇರಿ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದವು. ತಮ್ಮ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದರು. ಇನ್ನು ಕೆಲ ರೈತ ಹೋರಾಟಗಾರರು ಪೊಲೀಸರ ಕಣ್ತಪ್ಪಿಸಿ ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಘಟನೆ ನಡೆಯಿತು.
ಇಲ್ಲಿನ ಸುವರ್ಣ ಗಾರ್ಡನ್ ಮತ್ತು ಹಳೆ ಪಿ.ಬಿ. ರಸ್ತೆ ಧಾರವಾಡ ನಾಕಾದಲ್ಲಿ ನಿಗದಿ ಪಡಿಸಿರುವ ಪ್ರತಿಭಟನಾ ಸ್ಥಳದಲ್ಲಿ 9 ಸಂಘಟನೆಗಳು ಧರಣಿ ನಡೆಸಿದವು. ಸಚಿವರಾದ ದಿನೇಶ ಗುಂಡೂರಾವ್, ಈಶ್ವರ ಖಂಡ್ರೆ, ಮಧು ಬಂಗಾರಪ್ಪ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.
ಭೂಸುಧಾರಣೆ ಕಾಯ್ದೆ 2020ರ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಂಘಟನೆಯ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಪೊಲೀಸರು ಕೆಲಕಾಲ ಪರದಾಡುವಂತೆ ಮಾಡಿತು.
ಮಧ್ಯಾಹ್ನ 2 ಗಂಟೆಯೊಳಗೆ ಸಚಿವರು ಸ್ಥಳಕ್ಕೆ ಆಗಮಿಸಿ ತಮ್ಮ ಮನವಿ ಸ್ವೀಕರಿಸುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ಮಧ್ಯಾಹ್ನ 3.30 ಆದರೂ ಯಾರೂ ಸುಳಿಯದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ಸೌಧ ಕಡೆ ತೆರಳಲು ಯತ್ನಿಸಿದರು. ಈ ವೇಳೆ ಅವರನ್ನು ಪೊಲೀಸರು ತಡೆದರು. ಆಗ ಪೊಲೀಸರೊಂದಿಗೆ ರೈತರು ತೀವ್ರ ವಾಗ್ವಾದ ನಡೆಸಿದರು. ಈ ನಡುವೆ ಕೆಲ ರೈತರು ಪೊಲೀಸರ ಕಣ್ತಪ್ಪಿಸಿ ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆದುಕೊಂಡು ಸುವರ್ಣ ಸೌಧದೊಳಗೆ ನುಗ್ಗಲು ಯತ್ನಿಸಿದರು. ಅಲ್ಲಿಯೇ ಇದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಹತ್ತಿಸಿಕೊಂಡು ಬಂದು ಪುನಃ ಪ್ರತಿಭಟನಾ ಸ್ಥಳಕ್ಕೆ ಬಿಟ್ಟರು.
Laxmi News 24×7