ಬೆಂಗಳೂರು: ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ’ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪೋಸ್ಟ್ಗೆ ಸಿಎಂ ಸಿದ್ದರಾಮಯ್ಯ ಕೌಂಟರ್ ಪೋಸ್ಟ್ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ನ ಗದ್ದುಗೆ ಗುದ್ದಾಟ ಮತ್ತಷ್ಟು ಕುತೂಹಲ ಮೂಡಿಸಿದೆ.
‘ನಾವು ಕರ್ನಾಟಕಕ್ಕೆ ಕೊಟ್ಟ ಮಾತು ಕೇವಲ ಸ್ಲೋಗನ್ ಅಲ್ಲ, ಅದೇ ನಮಗೆ ಜಗತ್ತು. ಜನರಿಗಾಗಿ ಜಗತ್ತನ್ನು ಉತ್ತಮಗೊಳಿಸದೇ ಹೋದರೆ ಕೊಟ್ಟ ಮಾತು ಶಕ್ತಿ ಆಗುವುದಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಕೌಂಟರ್ ಪೋಸ್ಟ್ ಮಾಡಿದ್ದಾರೆ.ಕೇವಲ ಮಾತಿನಲ್ಲಿ ಅಲ್ಲ, ಕಾರ್ಯಗತಗೊಳಿಸಿದ್ದೇವೆ: ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಶಕ್ತಿ ಯೋಜನೆ ರಾಜ್ಯದ ಮಹಿಳೆಯರಿಗೆ 600 ಕೋಟಿ ಉಚಿತ ಟ್ರಿಪ್ ಕಲ್ಪಿಸಿರುವುದನ್ನು ಹೇಳಲು ಹೆಮ್ಮೆಯಾಗುತ್ತದೆ. ಸರ್ಕಾರ ರಚನೆಯಾದಾಗಿನಿಂದ ಮೊದಲ ತಿಂಗಳಿಂದಲೇ ನಾವು ನಮ್ಮ ಗ್ಯಾರಂಟಿಯನ್ನು ಕಾರ್ಯಗತಗೊಳಿಸಿದ್ದೇವೆ. ಕೇವಲ ಮಾತಿನಲ್ಲಿ ಅಲ್ಲ, ಅದನ್ನು ಕಾರ್ಯಗತಗೊಳಿಸಿದ್ದೇವೆ ಎಂದು ವಿವರಿಸಿದ್ದಾರೆ.
ಪೋಸ್ಟ್ನಲ್ಲಿ ಪಂಚ ಗ್ಯಾರಂಟಿಯಿಂದ ಫಲಾನುಭವಿಗಳು ಪಡೆಯುತ್ತಿರುವ ಅನುಕೂಲಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ನನ್ನ ಮೊದಲ ಅವಧಿಯಲ್ಲಿ (2013-18)ರಲ್ಲಿ 165 ಭರವಸೆಗಳ ಪೈಕಿ 157ನ್ನು ಈಡೇರಿಸಿ 95% ಸಾಧನೆ ಮಾಡಿದ್ದೇವೆ. ಪ್ರಸಕ್ತ ಅವಧಿಯಲ್ಲಿ 593 ಭರವಸೆಗಳ ಪೈಕಿ 243+ನ್ನು ಈಗಾಗಲೇ ಈಡೇರಿಸಲಾಗಿದೆ. ಉಳಿದ ಭರವಸೆಗಳನ್ನು ಬದ್ದತೆ, ವಿಶ್ವಾಸಾರ್ಹತೆ ಮತ್ತು ಜಾಗರೂಕತೆಯಿಂದ ಪೂರೈಸುತ್ತೇವೆ ಎಂದಿದ್ದಾರೆ.
ಕರ್ನಾಟಕ ಜನರು ನೀಡಿದ ಜನಾದೇಶ ಕ್ಷಣಿಕ ಮಾತ್ರವಲ್ಲ, ಅದು ಪೂರ್ಣ ಐದು ವರ್ಷದ ಜವಾವ್ದಾರಿ. ನಾನೂ ಸೇರಿದಂತೆ ಕಾಂಗ್ರೆಸ್ ಪಕ್ಷ ನಮ್ಮ ಜನರಿಗಾಗಿ ಸಹಾನುಭೂತಿ, ಸ್ಥಿರತೆ ಮತ್ತು ಧೈರ್ಯದಿಂದ ನುಡಿದಂತೆ ನಡೆಯುತ್ತಿದ್ದೇವೆ. ನಾವು ಕರ್ನಾಟಕಕ್ಕೆ ಕೊಟ್ಟ ಮಾತು ಬರೇ ಸ್ಲೋಗನ್ ಅಲ್ಲ, ಅದೇ ನಮಗೆ ಜಗತ್ತಾಗಿದೆ ಎಂದು ತಿಳಿಸಿದ್ದಾರೆ.
Laxmi News 24×7