ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆದು ಚರ್ಚೆ ಮಾಡುತ್ತೇವೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದಾಗ ಡಿಕೆಶಿ, ಹೈಕಮಾಂಡ್ ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಕರೆದರೆ, ನಾವು ಮಾತನಾಡಿಕೊಂಡು ದೆಹಲಿಗೆ ಹೋಗುತ್ತೇವೆ ಎಂದರು.
ಇದುವರೆಗೂ ಕರೆದಿಲ್ಲ- ಡಿಕೆಶಿ: ಇದುವರೆಗೂ ಯಾರೂ ನನ್ನನ್ನು ದೆಹಲಿಗೆ ಕರೆದಿಲ್ಲ. ಇಂದಿರಾ ಗಾಂಧಿ ಅವರು ಆರಂಭಿಸಿದ ಅಂಗನವಾಡಿ ಯೋಜನೆಯ 50 ವರ್ಷದ ಕಾರ್ಯಕ್ರಮವಿದೆ. ಮುಂಬೈನಲ್ಲಿ ನನಗೆ ಖಾಸಗಿ ಕಾರ್ಯಕ್ರಮವಿದ್ದು, ಅಲ್ಲಿಗೆ ಹೋಗಿ ಇಂದೇ (ಗುರುವಾರ) ಮರಳುತ್ತೇನೆ ಎಂದು ತಿಳಿಸಿದರು.
ರಾಜಣ್ಣ ಪ್ರತಿಕ್ರಿಯೆ: ಇನ್ನೊಂದೆಡೆ, ಇದೇ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಹೈಕಮಾಂಡ್ ಕರೆದರೆ ಸಿಎಂ ಹೋಗುತ್ತಾರೆ. ಯಾವ ಉದ್ದೇಶದಿಂದ ಕರೆಯುತ್ತಾರೆ ಎಂಬುದು ಗೊತ್ತಾಗಬೇಕು. ಸಿಎಂ ಸ್ಥಾನ ಬಿಡುವುದೋ, ಕೊಟ್ಟುಕೊಳ್ಳುವುದೋ ಎಂಬುದು ಮುಂದಿನ ವಿಚಾರ. ಯಾರು ಮಾತು ಕೊಟ್ಟಿದ್ದಾರೆ, ಬಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಇದು ನಮ್ಮ ತೀರ್ಮಾನ ಅಲ್ಲ. ಹೈಕಮಾಂಡ್ ತೀರ್ಮಾನ ಅಂತಿಮ ಅಲ್ವಾ ಎಂದು ಹೇಳಿದರು.
ಅಹಿಂದ ಎಲ್ಲ ಪಾರ್ಟಿಯಲ್ಲೂ ಇದೆ: ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಹೋಗುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ನೋಟಿಸ್ ಕೊಡುವುದು, ಉತ್ತರ ಕೊಡುವುದು ನಿರಂತರ ಕ್ರಿಯೆ. ಯಾವ್ಯಾವ ಸಂದರ್ಭದಲ್ಲಿ ಏನು ನಡೆಯಬೇಕು ಎಂಬುದು ನಡೆಯುತ್ತದೆ ಎಂದರು. ಇದೇ ವೇಳೆ, ಎಲ್ಲ ಪಾರ್ಟಿಯಲ್ಲಿ ಅಹಿಂದ ಇದೆ. ಕಾಂಗ್ರೆಸ್ ಪಾರ್ಟಿಗೆ ಮಾತ್ರ ಅಹಿಂದ ಇಲ್ಲ ಎಂದು ರಾಜಣ್ಣ ಪ್ರತಿಕ್ರಿಯಿಸಿದರು.
ದೆಹಲಿಗೆ ಸಿಎಂ, ಡಿಸಿಎಂ ಕರೆಸಿ ಮುಂದಿನ ತೀರ್ಮಾನ ಎಂದಿರುವ ಖರ್ಗೆ: ದೆಹಲಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ, ಹೇಗೆ ಮುಂದುವರೆಯಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಬೆಳಗ್ಗೆ ಸ್ಪಷ್ಟಪಡಿಸಿದ್ದರು.
ಸದಾಶಿವನಗರ ನಿವಾಸದಲ್ಲಿ ದೆಹಲಿಗೆ ತೆರಳುವ ಮುನ್ನ ಮಾತನಾಡಿದ್ದ ಅವರು, ”ನಾನು ದೆಹಲಿಗೆ ಹೋದ ಮೇಲೆ ಮಾತುಕತೆ ನಡೆಯಲಿದೆ. ಪ್ರಮುಖ ಮೂರ್ನಾಲ್ಕು ಜನರನ್ನು ಕರೆಸಿ ಮಾತನಾಡುತ್ತೇನೆ. ಹೇಗೆ ಮುಂದುವರೆಯಬೇಕೆಂದು ತೀರ್ಮಾನ ಮಾಡುತ್ತೇನೆ. ಸಿಎಂ, ಡಿಸಿಎಂ ಅವರೆಲ್ಲರನ್ನು ಕರೆಸಿಯೇ ಮಾತನಾಡ್ತೇನೆ. ಎಲ್ಲವನ್ನೂ ಸೆಟಲ್ ಮಾಡುತ್ತೇವೆ. ಹೈಕಮಾಂಡ್ ಎಂದರೆ ನಾನೊಬ್ಬನೇ ಅಲ್ಲ, ಅದರಲ್ಲಿ ಪಕ್ಷ ಹಲವು ನಾಯಕರು ಇದ್ದೇವೆ” ಎಂದು ತಿಳಿಸಿದ್ದರು.
Laxmi News 24×7