ಮೈಸೂರು: ಶಿಕ್ಷಣ ಮುಗಿದ ನಂತರ ಜೀವನ ಮುಗಿದಂತಾಗುವುದಿಲ್ಲ. ಅದು ನಿಮ್ಮ ಹೊಸ ಪ್ರಯಾಣದ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ನೂತನ ಪದವೀಧರರಿಗೆ ಕಿವಿಮಾತು ಹೇಳಿದರು.
ನಗರದ ಜೆಎಸ್ಎಸ್ ವೈದ್ಯಕೀಯ ಕಾಲೇಜು ಆವರಣದಲ್ಲಿ ನಡೆದ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 16ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಿಮ್ಮ ಗುರಿಗಳು, ಕನಸುಗಳು ಮತ್ತು ಭವಿಷ್ಯವನ್ನು ಉಜ್ವಲಗೊಳಿಸಲು ನೀವು ಪ್ರಯತ್ನಿಸಬೇಕು. ಎಲ್ಲರೂ ಯಶಸ್ವಿಯಾಗಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಪ್ರತಿಭೆ ದೇವರ ಕೊಡುಗೆ ಆಗಬಹುದು, ಆದರೆ ಸ್ಥಿರತೆ ನಿಮ್ಮ ಕೈಯಲ್ಲಿದೆ. ನಿಮ್ಮ ಗುರಿಯತ್ತ ವೇಗದಲ್ಲಿ ನಿರಂತರವಾಗಿ ಸಾಗಬೇಕು. ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ದೇವರು ಪ್ರತಿಯೊಬ್ಬರನ್ನೂ ವಿಭಿನ್ನ ಪ್ರತಿಭೆಯಿಂದ ರಚಿಸಿದ್ದಾನೆ. ಕೆಲವೊಮ್ಮೆ ನಿರಾಕರಣೆ, ವಿಫಲತೆಗಳು ಎದುರಾಗಬಹುದು. ಆಗ ಇದು ನನ್ನೊಬ್ಬನಿಗೇ ಏಕೆ ಎಂದು ಯೋಚಿಸಬೇಡಿ. ಎಲ್ಲರಿಗೂ ಸಮಸ್ಯೆಗಳಿರುತ್ತವೆ, ಕೇವಲ ನೀವು ನಿಮ್ಮದನ್ನು ಹೆಚ್ಚು ಅರಿಯುತ್ತೀರಿ ಎಂದರು.
ವಿಫಲತೆಗಳಿಂದ ಕುಗ್ಗಬೇಡಿ. ಹೆಚ್ಚು ಬಾರಿ ಸೋತವರು, ಹೆಚ್ಚು ಬಲಿಷ್ಠರಾಗುತ್ತಾರೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಗುರಿ ಸಾಧಿಸುವವರೆಗೆ ನಿಲ್ಲಬೇಡಿ. ಎಂದೆಂದಿಗೂ ಶ್ರಮವನ್ನು ನಿಲ್ಲಿಸಬೇಡಿ. ಕೆಲವೊಮ್ಮೆ ವಿಶ್ರಾಂತಿ ಬೇಕಾಗಬಹುದು, ಅದು ಸಹಜ. ಆದರೆ ವಿಶ್ರಾಂತಿ ನಂತರ ಹೆಚ್ಚು ಉತ್ಸಾಹದಿಂದ ಪುನರಾರಂಭಿಸಬೇಕು ಎಂದು ತಿಳಿಸಿದರು.
Laxmi News 24×7