ಕಬ್ಬು ಬೆಳೆಗಾರರ ಹೋರಾಟ ಯಾವಾಗ ಬೇಕಾದರೂ ಹೆಚ್ಚಾಗಬಹುದು
ಹುಬ್ಬಳ್ಳಿ: “ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ತಾತ್ಕಾಲಿಕವಾಗಿ ಮಾತ್ರ ಶಮನವಾಗಿದೆ. ಮತ್ತೆ ಯಾವಾಗ ಬೇಕಾದರೂ ಹೋರಾಟ ಹೆಚ್ಚಾಗಬಹುದು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಇಂತಹ ಸಮಸ್ಯೆ ನಿರ್ಮಾಣವಾಗಿದೆ” ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸರ್ಕಾರ ಯಾವ ಸಂದರ್ಭದಲ್ಲಿ ಏನು ಮಾಡಬೇಕೋ ಅದನ್ನು ಮಾಡಿಲ್ಲ. ಸಕ್ಕರೆ ಮಂತ್ರಿಗಳಿಗೆ ಎಲ್ಲಾ ಗೊತ್ತಿರುತ್ತದೆ. ನಾನು ಸಕ್ಕರೆ ಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ರೈತರು, ಕಾರ್ಖಾನೆ ಮಾಲೀಕರನ್ನು ಕರೆಯಿಸಿ ಸಭೆ ಮಾಡುತ್ತಿದ್ದೆ. ರೈತರ ಹೋರಾಟ ನಡೆದು 8 ದಿನಕ್ಕೆ ಮುಖ್ಯಮಂತ್ರಿ ಸಭೆ ಮಾಡುತ್ತಾರೆ. ಅಲ್ಲಿಂದಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರದ ನಿರ್ಧಾರಕ್ಕೆ ರೈತರು ಇನ್ನೂ ಸಂಪೂರ್ಣವಾಗಿ ಒಪ್ಪಿಲ್ಲ. ಒಂದೊಂದು ಕಡೆ ಒಂದೊಂದು ದರ ಇರುತ್ತದೆ. ಪರಿಸ್ಥಿತಿ ತಿಳಿದುಕೊಂಡು ನಿರ್ಧಾರ ಕೈಗೊಳ್ಳಬೇಕಿತ್ತು. ತರಾತುರಿಯಲ್ಲಿ ನಿರ್ಧಾರ ಮಾಡಿದ್ದು, ಇನ್ನೂ ಲಿಖಿತ ಆದೇಶವಾಗಿಲ್ಲ. ಕಾರ್ಖಾನೆ ಮಾಲೀಕರು ದುಡ್ಡು ಕೊಡದೇ ಹೋದರೆ, ನೀವು ವಸೂಲಿ ಮಾಡಿ ಕೊಡುತ್ತೀರಾ” ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ಮುಂದುವರೆದು, “ಕೇಂದ್ರ ಸರ್ಕಾರದ ಪಾತ್ರ ಇದೆ, ಅಲ್ಲಿ ನಾವೆಲ್ಲಾ ಸೇರಿ ಒತ್ತಾಯ ಮಾಡೋಣ. ಆದರೆ ಎಲ್ಲವನ್ನೂ ಕೇಂದ್ರದ ಮೇಲೆ ಹಾಕುವುದು ಎಷ್ಟು ಸರಿ?. ಈಗ ಹತ್ತಿದ ಬೆಂಕಿ ತಾತ್ಕಾಲಿಕ ಶಮನ ಅಷ್ಟೇ. ಪ್ರತಿ ವರ್ಷ ಇದೆ ಸಮಸ್ಯೆ ಆಗಬಾರದು. ಶಾಶ್ವತ ಪರಿಹಾರ ಆಗಬೇಕು” ಎಂದು ಶೆಟ್ಟರ್ ಸೂಚಿಸಿದರು.
ಇದೇ ವಿಚಾರವಾಗಿ, “ಶುಗರ್ ಇಲಾಖೆಗೆ ಬಜೆಟ್ ಕಡಿಮೆ ಕೊಟ್ಟಿದ್ದಾರೆ. 8-10 ಸಿಬ್ಬಂದಿ ಇಟ್ಟುಕೊಂಡು ಹೇಗೆ ಕೆಲಸ ಮಾಡುತ್ತಾರೆ. ಇಳುವರಿ ಶುಗರ್ ಫ್ಯಾಕ್ಟರಿ ಮಾಲೀಕರು ಚೆಕ್ ಮಾಡುತ್ತಾರೆ. ಸರ್ಕಾರ ಏನಾದರೂ ಮಾಡಬೇಕಲ್ಲ. ಬಹಳಷ್ಟು ಗೊಂದಲ ಇರುವ ಇಲಾಖೆ, ಇದರಿಂದ ತೊಂದರೆ ಆಗಿದೆ.
ರೈತರಿಗೆ ಯೋಗ್ಯ ದರ ಸಿಗುವ ಕೆಲಸ ಆಗಬೇಕು” ಎಂದರು.
Laxmi News 24×7