ಹುಬ್ಬಳ್ಳಿ : ಆರ್ಎಸ್ಎಸ್ ಸಂಘಟನೆಯನ್ನು ಎದುರು ಹಾಕಿಕೊಂಡಿದ್ದೀರಿ, ನೀವು ಸುಟ್ಟು ಭಸ್ಮ ಆಗ್ತೀರಿ. ಇದು ನಿಮ್ಮ ಅಂತ್ಯದ ಆರಂಭ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರು ಸಿಡಿಮಿಡಿಗೊಂಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ಸಿಎಂ ಡಿನ್ನರ್ ಮೀಟಿಂಗ್ ಕರೆದರು. ಅದನ್ನು ಕರೆದಿದ್ದು ಏತಕ್ಕೆ?. ಒಬ್ಬಬ್ಬ ಮಂತ್ರಿಯನ್ನು ಸೆಪರೇಟ್ ಆಗಿ ಕರೆದು ಮಾತನಾಡಿದ್ದಾರೆ. ಅವರ ಇಲಾಖೆ, ಅವರ ಸಾಮರ್ಥ್ಯ ಎಷ್ಟು? ಅಂತ ನೋಡಿಕೊಂಡು ಫಿಕ್ಸ್ ಮಾಡಿದ್ದಾರೆ. ಈ ಇಲಾಖೆಯಿಂದ ಇಷ್ಟು ಹಣ ಕೊಡಬೇಕು ಎಂದು ನಿಗದಿಪಡಿಸಿದ್ದಾರೆ. ಅಲ್ಲಿ ಬಿಹಾರ ಎಲೆಕ್ಷನ್ಗೆ ಹಣ ಕಳುಹಿಸಬೇಕು. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ಗೆ ಸಂಪನ್ಮೂಲ ಇರುವ ರಾಜ್ಯವೆಂದರೆ ಕರ್ನಾಟಕ. ಹೈಕಮಾಂಡ್ಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಟಿಎಂ ಇದ್ದಂತೆ. ಅಧಿಕಾರಿಗಳನ್ನು ಕೇಳಿದರೆ, ಅವರು ಬಿಹಾರಕ್ಕೆ ಹಣ ಕಳುಹಿಸಬೇಕು, ಅದಕ್ಕೆ ಕಮಿಷನ್ ಜಾಸ್ತಿ ಆಗಿದೆ ಎನ್ನುತ್ತಿದ್ದಾರೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಬಿಡಿಎ ಇದೆ, ಕಾರ್ಪೋರೇಷನ್ ಇದೆ. ಬೇರೆ ಬೇರೆ ಸಂಸ್ಥೆಗಳಿಂದ ಬಿಲ್ಡಿಂಗ್ ಪರ್ಮಿಷನ್ ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲದೇ ಸಿಸಿ ತೆಗೆದುಕೊಳ್ಳಬೇಕು. ಅಲ್ಲಿ ಯಾವುದೇ ಸರ್ಟಿಫಿಕೇಟ್ ತೆಗೆದುಕೊಳ್ಳಲು ಹೋದರೆ ಇಂತಿಷ್ಟು ಎಂದು ರೇಟ್ ಫಿಕ್ಸ್ ಮಾಡಿದ್ದಾರೆ. ಭ್ರಷ್ಟಾಚಾರದ ಫೀಸ್ನ್ನು ಕೊಟ್ಟರೆ ಮಾತ್ರ ನಿಮ್ಮ ಕೈಗೆ ಸರ್ಟಿಫಿಕೇಟ್ ಬರುತ್ತದೆ. ಬಹಳ ಡೀಪ್ ಆಗಿ ಹೋದರೆ ಅದರಲ್ಲಿ ಯಾರ್ಯಾರಿಗೆ ಪಾಲಿದೆ ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಸಿಎಂ ಸಿದ್ಧರಾಮಯ್ಯ ಅವರು ಆಡಳಿತದಲ್ಲಿ ಬಿಗಿ ಕಳೆದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ, ಆರ್ಥಿಕತೆ ಕುಸಿದಿದೆ, ಭ್ರಷ್ಟಾಚಾರ ಮಿತಿ ಮೀರಿದೆ. ಗುತ್ತಿಗೆದಾರರ ಆರೋಪಕ್ಕೆ ಕೋರ್ಟ್ಗೆ ಹೋಗಲಿ ಅಂತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಇಲಾಖೆ ಬಗ್ಗೆ ಕಾಳಜಿ ವಹಿಸೋದನ್ನು ಬಿಟ್ಟು ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಆರ್ಎಸ್ಎಸ್ ಬಗ್ಗೆ ಮಾತನಾಡೋಕೆ ಏನು ನೈತಿಕತೆ ಇದೆ ಎಂದಿದ್ದಾರೆ.
Laxmi News 24×7