ಹಾವೇರಿ: ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಹರಿಯುತ್ತಿವೆ. ಇವುಗಳಲ್ಲಿ ಜಿಲ್ಲೆಯ ಜೀವನದಿ ವರದಾ. ಹಾನಗಲ್, ಶಿಗ್ಗಾಂವ್, ಸವಣೂರು ಮತ್ತು ಹಾವೇರಿ ತಾಲೂಕುಗಳಲ್ಲಿ ಇದು ಹರಿಯುತ್ತದೆ. ಲಕ್ಷಾಂತರ ರೈತರ ಜಮೀನುಗಳಿಗೆ ನೀರುಣಿಸುತ್ತದೆ. ಬಂಕಾಪುರ, ಶಿಗ್ಗಾಂವ್, ಸವಣೂರು, ಹಾವೇರಿ, ಹೊಸರಿತ್ತಿ ಸೇರಿದಂತೆ ಹಲವು ನಗರ ಪಟ್ಟಣಗಳ ಜನರಿಗೆ ಕುಡಿಯುವ ನೀರನ್ನೂ ಪೂರೈಸುತ್ತದೆ. ಜಿಲ್ಲೆಯ 9 ಬ್ಯಾರೇಜ್ಗಳಲ್ಲಿ ಮಳೆ ಮುಗಿಯುತ್ತಿದ್ದಂತೆ, ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಕ್ರಸ್ಟ್ಗೇಟ್ ಹಾಕಲಾಗುತ್ತದೆ. ಈ ರೀತಿ ಕ್ರಸ್ಟ್ಗೇಟ್ ಹಾಕಿದರೆ ಹಿಂಗಾರು ಹಂಗಾಮಿಗೆ ನೀರು ಸಿಗುತ್ತದೆ. ಆದರೆ ಈ ವರ್ಷ ಮಳೆ ಮುಗಿದರೂ ಕ್ರಸ್ಟ್ಗೇಟ್ ಹಾಕಿಲ್ಲ ಎಂದು ರೈತರು ತಿಳಿಸಿದ್ದಾರೆ.
ವರದಾ ನದಿಗೆ 9 ಬ್ಯಾರೇಜ್: ವರದಾ ನದಿಗೆ ಹಾನಗಲ್, ಶಿಗ್ಗಾಂವ್, ಸವಣೂರು, ಶೇಷಗಿರಿ, ಕುಸನೂರು, ಸಂಗೂರು, ನಾಗನೂರು, ಕಳಸೂರು, ಕರ್ಜಗಿ, ಹೊಸರಿತ್ತಿ ಮತ್ತು ಮರಡೂರು ಸೇರಿದಂತೆ 9 ಕಡೆ ಬ್ಯಾರೇಜ್ ನಿರ್ಮಿಸಲಾಗಿದೆ. ಪ್ರತಿವರ್ಷ ಈ ವೇಳೆಗೆ ಕ್ರಸ್ಟ್ಗೇಟ್ ಹಾಕಲಾಗುತ್ತಿತ್ತು. ಇದರಿಂದ ನದಿಯ ಹರಿವಿನ ಪ್ರಮಾಣ ಕಡಿಮೆಯಾದರೂ ಸಹ ಸಾಕಷ್ಟು ಪ್ರಮಾಣದ ನೀರು ನದಿಯಲ್ಲಿ ನಿಲ್ಲುತ್ತಿತ್ತು. ಸ್ವಲ್ಪ ಹಿಂಗಾರು ಮಳೆ ಬಂದು ಬ್ಯಾರೇಜ್ಗಳಲ್ಲಿ ನೀರು ನಿಂತರೂ ಮುಂದಿನ ಮುಂಗಾರಿನವರೆಗೆ ರೈತರಿಗೆ, ಕಾಡುಪ್ರಾಣಿಗಳಿಗೆ ಹಾಗೂ ಜನ-ಜಾನುವಾರುಗಳಿಗೆ ನೀರು ಸಿಗುತ್ತದೆ.
ಈ ವರ್ಷ ಮುಂಗಾರು ಮುಗಿದು ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೂ ಸಹ ಕ್ರಸ್ಟ್ಗೇಟ್ ಹಾಕಿಲ್ಲ. ಗೇಟ್ ಹಾಕದಿದ್ದರೆ ಮುಂದಿನ ಮುಂಗಾರು ಮಳೆ ಇರಲಿ, ಜನವರಿ ತಿಂಗಳಲ್ಲಿ ಸಂಕ್ರಾಂತಿ ಆಚರಿಸಲು ಜನರಿಗೆ ನೀರಿಲ್ಲದಂತಾಗುತ್ತದೆ ಎಂಬುದು ರೈತರ ಆತಂಕ.
ರೈತ ಭುವನೇಶ್ವರ ಶಿಡ್ಲಾಪುರ್ ಅವರು ಮಾತನಾಡಿ, “ಜಿಲ್ಲೆಯಲ್ಲಿರುವ ಚೆಕ್ಡ್ಯಾಮ್ಗಳಿಗೆ ಸರಿಯಾದ ನಿರ್ವಹಣೆ ಇಲ್ಲ. ಗೇಟ್ ಸರಿಯಾಗಿ ಹಾಕುವುದಿದಿಲ್ಲ. ಅದನ್ನು ನಿರ್ವಹಿಸಲು ಯಾವುದೇ ಲೇಬರ್ಗಳನ್ನು ನಿಯೋಜಿಸುವುದಿಲ್ಲ. ಈ ಬಗ್ಗೆ ನಾವು ಇಂಜಿನಿಯರ್ಗಳಿಗೆ ಮನವಿ ಮಾಡಿದ್ದೇವೆ. ನೀವು ಇಲ್ಲಿ ನಿಂತು ಒಂದು ವಾರ ಗೇಟ್ ಹಾಕಿಸಿದರೆ ನಮಗೆ ನಾಲ್ಕೈದು ತಿಂಗಳು ಕುಡಿಯುವ ನೀರಿನ ಬರ ತಪ್ಪುತ್ತದೆ. ಸಣ್ಣ ನೀರಾವರಿ ಸಚಿವರೊಂದಿಗೆ ಫೋನ್ ಮೂಲಕ ಮಾತನಾಡಿದ್ದೇವೆ. ಅವರೂ ಕೂಡಾ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಪ್ರತಿಯೊಂದಕ್ಕೂ ನಾವು ಬಂದು ಹೇಳಿದರೆ ಕೆಲಸ ನಡೆಯುವಂತಾಗಿದೆ. ನೀವೇ ಸ್ವತಃ ಪ್ರಾಮಾಣಿಕವಾಗಿ ಗೇಟ್ ಅಳವಡಿಸಬೇಕು” ಎಂದು ಹೇಳಿದರು.
Laxmi News 24×7