ಶಿರಸಿ:ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ಸಾಗಿಸುತ್ತಿದ್ದ VRL ಸಂಸ್ಥೆಗೆ ಸೇರಿದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಅಡಿಕೆ ತೋಟಕ್ಕೆ ಮಗುಚಿ ಬಿದ್ದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಈ ಅಪಘಾತದಿಂದ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸೇರಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ದಿನಾಂಕ 09.10.2025 ರಂದು ರಾತ್ರಿ ಸುಮಾರು 9:30 ಗಂಟೆ ಸುಮಾರಿಗೆ ಲಾರಿಯಲ್ಲಿ 400 ಚೀಲಗಳಷ್ಟು ಅಡಿಕೆಯನ್ನು ತುಂಬಿಕೊಂಡು ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಸಾಗಿಸಲಾಗುತ್ತಿತ್ತು.
ಶಿರಸಿ-ಹುಬ್ಬಳ್ಳಿ ರಸ್ತೆಯ ಹುಡೇಲಕೊಪ್ಪ ಬಸ್ ನಿಲ್ದಾಣದ ಸಮೀಪ ಅಪಘಾತ ಸಂಭವಿಸಿದೆ. ಆ ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅದನ್ನು ಗಮನಿಸದೆ ಚಾಲಕ ಸತ್ಯನಾರಾಯಣ ಲಾರಿಯನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದಾನೆ. ಪರಿಣಾಮವಾಗಿ ರಸ್ತೆ ತಿರುವಿನಲ್ಲಿ ಚಾಲನಾ ನಿಯಂತ್ರಣ ತಪ್ಪಿ, ಲಾರಿಯು ರಸ್ತೆಯಿಂದ ಪಕ್ಕಕ್ಕೆ ಜಾರಿ ಅಡಿಕೆ ತೋಟದಲ್ಲಿ ಮುಗುಚಿ ಬಿದ್ದಿದೆ.
ಅಪಘಾತದ ರಭಸಕ್ಕೆ ಲಾರಿ ಸಂಪೂರ್ಣವಾಗಿ ಜಖಂಗೊಂಡಿದೆ. ದೂರುದಾರರಿಗೆ ಬೆನ್ನಿನ ಭಾಗದಲ್ಲಿ ಮತ್ತು ಹಣೆಯ ಹತ್ತಿರ ಸಣ್ಣ ಗಾಯಗಳಾಗಿವೆ. ಲಾರಿ ಚಾಲಕ ಸತ್ಯನಾರಾಯಣನಿಗೆ ಕೈ ಮತ್ತು ಕಾಲುಗಳ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಬನವಾಸಿ ಪಿಎಸ್ಐ ಮಾಂತೇಶ್ ಕುಂಬಾರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಸತ್ಯನಾರಾಯಣನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ದಾಖಲಿಸಲಾಗಿದೆ.
Laxmi News 24×7