ಬೆಂಗಳೂರು: ನಗರದಲ್ಲಿ ತಡರಾತ್ರಿ ನಿರಂತರವಾಗಿ ಸುರಿದ ಮಳೆ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಆರಂಭವಾದ ಗುಡುಗು ಹಾಗೂ ಮಿಂಚು ಸಹಿತ ಮಳೆ ರಾತ್ರಿಯಿಡೀ ಸುರಿದಿದೆ. ಹಲವೆಡೆ ರಸ್ತೆಗಳು ಜಲಾವೃತಗೊಂಡ ಪರಿಣಾಮ ವಾಹನ ಸವಾರರು ಹೈರಾಣಾಗಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿ, ಮಹಾದೇವಪುರದ ಬಳಿ ರಸ್ತೆಗಳಲ್ಲಿ ನೀರು ನಿಂತು ಸಂಚರಿಸುವುದೇ ದುಸ್ತರವಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ಲೇಔಟ್ನಲ್ಲಿ ಒಳಚರಂಡಿಯಿಂದ ನೀರು ಉಕ್ಕಿ ಹರಿದ ಪರಿಣಾಮ ರಸ್ತೆ, ಪಾದಚಾರಿ ಮಾರ್ಗ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಬೇರೆ ವಿಧಿಯಿಲ್ಲದೆ ಅದೇ ರಸ್ತೆಯಲ್ಲಿ ವಾಹನ ಸವಾರರು ಸಾಗುವಂತಾಗಿದ್ದು, ಪಾಲಿಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಕೆ.ಆರ್.ಮಾರ್ಕೆಟ್ನಲ್ಲಿ ನೀರು ನಿಂತ ಪರಿಣಾಮ ಹೂವಿನ ವ್ಯಾಪಾರಿಗಳು ಸಂಕಷ್ಟ ಪಡುವಂತಾಯಿತು. ಮಾರಾಟಕ್ಕಾಗಿ ತಂದಿದ್ದ ಹೂವುಗಳನ್ನು ಸಂರಕ್ಷಿಸಿಕೊಳ್ಳಲು ವ್ಯಾಪಾರಸ್ಥರು ರಾತ್ರಿಯಿಡೀ ಪರದಾಡಿದ್ದಾರೆ. ಇಂದೂ ಸಹ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಮಾನ ಇಲಾಖೆ ನೀಡಿದೆ.
ರಾತ್ರಿಯಿಡೀ ಅಧಿಕಾರಿಗಳು ಅಲರ್ಟ್ ಇದ್ದು, ಕಾರ್ಯ ನಿರ್ವಹಿಸಿದ್ದಾರೆ. ಯಾವುದೇ ದೊಡ್ಡ ಪ್ರಮಾಣದ ಅವಘಡಗಳು ವರದಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇತ್ತೀಚಿಗೆ ರಸ್ತೆ ಗುಂಡಿ ಮುಚ್ಚಲು ಕೆಲವೆಡೆ ಹಾಕಲಾಗಿದ್ದ ಡಾಂಬರ್ ರಾತ್ರಿಯ ಮಳೆಗೆ ಕಿತ್ತುಬಂದಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಮಳೆ ಬಂದಾಗ ಕೆಲವು ಸಮಸ್ಯೆಗಳು ಸಹಜ. ಅವುಗಳನ್ನು ಸರಿಪಡಿಸಲಾಗುವುದು ಎಂದಿದ್ದಾರೆ.
Laxmi News 24×7