ಗಂಗಾವತಿ, ಕೊಪ್ಪಳ: ಹಳೇಯ ದ್ವೇಷದ ಹಿನ್ನೆಲೆ ಬಿಜೆಪಿ ಯುವ ಮುಖಂಡನೊಬ್ಬನನ್ನು ಐವರ ಗುಂಪು, ಅಮಾನುಷವಾಗಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಣಾಪ್ರತಾಪ್ ಸಿಂಗ್ ವೃತ್ತದ ಸಮೀಪ ಇರುವ ರಿಲಯನ್ಸ್ ಪಾಯಿಂಟ್ನ ಲೀಲಾವತಿ ಆಸ್ಪತ್ರೆ ಸಮೀಪ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ (32) ಎಂದು ತಿಳಿದು ಬಂದಿದೆ. ತಡರಾತ್ರಿ ಊಟ ಮುಗಿಸಿಕೊಂಡು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಹಿಂಬಾಲಿಸಿದ ಐವರು ಯುವಕರ ಗುಂಪು, ದ್ವಿಚಕ್ರ ವಾಹನಕ್ಕೆ ಗುದ್ದಿ ಬೀಳಿಸಿದ್ದಾರೆ.
ಬಳಿಕ ಕೆಳಕ್ಕೆ ಬಿದ್ದ ವೆಂಕಟೇಶನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ ಮನಬದಂತೆ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶನನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಮಧ್ಯರಾತ್ರಿ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗಿದೇ ವ್ಯಕ್ತಿ ಸಾವನ್ನಪ್ಪಿದ್ದಾನೆ.
ವಾಹನ ಬಿಟ್ಟು ಪರಾರಿ:‘ ವೆಂಕಟೇಶನನ್ನು ಕೊಲೆಗೆ ನಾಲ್ಕೈದು ದಿನಗಳಿಂದ ಸ್ಕೆಚ್ ಹಾಕಿದ್ದ ಆರೋಪಿಗಳು, ಆತನ ಚಲನ – ವಲನ ಗಮನಿಸಿದ್ದರು. ಅಂತಿಮವಾಗಿ ಮಂಗಳವಾರ ಅವರ ಸ್ಕೆಚ್ ಪ್ರಕಾರ ಆತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ನಡುವೆ ಆರೋಪಿಗಳು ತಂದಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ತಾಂತ್ರಿಕ ದೋಷಕಾಣಿಸಿಕೊಂಡ ಹಿನ್ನೆಲೆ ಆನೆಗೊಂದಿ ರಸ್ತೆಯ ಪಿಎಲ್ಡಿ ಬ್ಯಾಂಕ್ ಸಮೀಪ ಕಾರು ಬಿಟ್ಟು ಪರಾರಿಯಾಗಿದ್ದಾರೆ. ಗಂಗಾವತಿ ಶಹರ ಪೊಲೀಸರು, ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಪ್ರತಿಕ್ರಿಯೆ: ನಾಲ್ಕೈದು ಜನ ಬಂದು ಹಲ್ಲೆ ಮಾಡಿದ್ದಾರೆಂಬ ಮಾಹಿತಿ ಇದೆ. ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊಲೆಗೆ ಹಳೇ ದ್ವೇಷ ಕಾರಣ ಅನ್ನೋ ಮಾಹಿತಿ ಇದೆ ಎಂದು ಕೊಪ್ಪಳ ಎಸ್ಪಿ ರಾಮ್ ಎಲ್. ಅರಸಿದ್ಧಿ ಹೇಳಿದ್ದಾರೆ. ಮೃತ ಯುವಕ ವೆಂಕಟೇಶನ ತಂದೆ ಹಂಪಣ್ಣ ಜಂತಕಲ್ ಎಂಬುವವರು ನೀಡಿದ ದೂರಿನ ಮೇರೆಗೆ ಗಂಗಾವತಿ ನಗರಠಾಣೆಯಲ್ಲಿ ಲಿಂಗರಾಜ ಕ್ಯಾಂಪಿನ ರವಿ ಮತ್ತಿತರ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಐವರ ಪೈಕಿ ನಾಲ್ಕು ಮಂದಿ ಕಂಪ್ಲಿ ಠಾಣೆಯಲ್ಲಿ ಶರಣಾಗತಿ: ಈ ನಡುವೆ ಗಂಗಾವತಿಯಲ್ಲಿ ಕೊಲೆ ಮಾಡಿದ ಆರೋಪಿಗಳ ಪೈಕಿ ನಾಲ್ವರು ಕಂಪ್ಲಿಗೆ ತೆರಳಿ ಅಲ್ಲಿನ ಪೊಲೀಸರ ಮುಂದೆ ಶರಣಾಗಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಂಧಿತ ಆರೋಪಿಗಳನ್ನು ಗಂಗಾವತಿಗೆ ಕರೆತರಕಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
Laxmi News 24×7