ಬೆಳಗಾವಿ: ಶಾವಿಗೆ ಹುಗ್ಗಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ?. ಶಾವಿಗೆ ಪಾಯಸ ಮತ್ತು ಉಪ್ಪಿಟ್ಟು ಎಲ್ಲರಿಗೂ ಇಷ್ಟ. ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಾವಿಗೆ ತಯಾರಿಸಲಾಗುತ್ತದೆ. ಈಗ ಆ ಶಾವಿಗೆಗೆ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು (ಸಿಇಒ) ಬ್ರ್ಯಾಂಡ್ ನೇಮ್ ಕೊಟ್ಟಿದ್ದಾರೆ. ‘ಬೆಳಗಾವಿ ಸಂಜೀವಿನಿ ಶಾವಿಗೆ’ ಶೀರ್ಷಿಕೆಯಡಿ ಪ್ಯಾಕೆಟ್ ಮೂಲಕ ಶಾವಿಗೆ ಮಾರಾಟ ಶುರುವಾಗಿದೆ. ಇದು ಶಾವಿಗೆ ತಯಾರಿಸುವ ಮಹಿಳೆಯರಿಗೆ ಹೊಸ ಭರವಸೆ ಮೂಡಿಸಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಮೊದಲೆಲ್ಲಾ ಉತ್ತರ ಕರ್ನಾಟಕ ಭಾಗದ ಪ್ರತಿ ಮನೆಯಲ್ಲೂ ಶಾವಿಗೆ ಹೊಸೆಯುತ್ತಿದ್ದರು. ಆದರೆ, ಈಗ ಯಾರಿಗೂ ಸಮಯ ಇಲ್ಲ. ಶಾವಿಗೆ ಮಾಡುವವರ ಬಳಿ ದುಡ್ಡು ಕೊಟ್ಟು ಖರೀದಿಸುವುದು ಸಾಮಾನ್ಯ ಆಗಿ ಬಿಟ್ಟಿದೆ. ಹೀಗೆ ತಯಾರಿಸುವ ಶಾವಿಗೆಗೆ ಒಂದು ಹೆಸರು ಕೊಡಬೇಕು. ಅದಕ್ಕೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ‘ಬೆಳಗಾವಿ ಸಂಜೀವಿನಿ ಶಾವಿಗೆ’ ಮೂಲಕ ಜಿ.ಪಂ ಸಿಇಒ ರಾಹುಲ್ ಶಿಂಧೆ ಅವರು ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ. ಎರಡು ತಿಂಗಳ ಹಿಂದೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆಯಡಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯು ಕರ್ನಾಟಕದಲ್ಲಿ ಸಂಜೀವಿನಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದು, ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವಲ್ಲಿ ದಾರಿ ತೋರುತ್ತಿದೆ. ಪ್ರತಿ ಕುಟುಂಬದ ಕನಿಷ್ಠ ಒಬ್ಬ ಮಹಿಳೆಯು ಈ ಯೋಜನೆಯ ಲಾಭ ಪಡೆಯುವ ಮೂಲಕ ಸ್ವ-ಉದ್ಯೋಗ ಪ್ರಾರಂಭಿಸಿ, ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ. ಜಿಲ್ಲಾ ಪಂಚಾಯತಿಯ ಸಂಜೀವಿನಿ ಘಟಕ ಇದೀಗ ಮಹಿಳೆಯರಿಗೆ ಬೆನ್ನೆಲುಬಾಗಿ ನಿಂತಿದೆ.
Laxmi News 24×7