ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ ಹಾಗೂ ದಿಂಬುಗಳನ್ನ ನೀಡದ ಆರೋಪ ಕುರಿತ ಅರ್ಜಿಯ ಆದೇಶವನ್ನ 57ನೇ ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ. ಇಂದು ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಖುದ್ದು ಹಾಜರಾದ ಜೈಲು ಅಧೀಕ್ಷಕ ಸುರೇಶ್ ಅವರು ದರ್ಶನ್ಗೆ ನೀಡಿರುವ ಸೌಲಭ್ಯಗಳ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
ಜೈಲಾಧಿಕಾರಿಗಳ ಪರ ವಾದ ಆರಂಭಿಸಿದ ಪ್ರಸನ್ನ ಕುಮಾರ್, ‘ಜೈಲಿನ ನಿಯಮಗಳ ಪ್ರಕಾರ ಸೌಲಭ್ಯಗಳನ್ನು ನೀಡಲಾಗಿದೆ. ಮಲಗಲು ಪಲ್ಲಂಗ ಕೊಡಿ ಎಂದರೆ ಹೇಗೆ ಕೊಡಲು ಸಾಧ್ಯ? ಆರೋಪಿಗೆ ಬೆಳಗ್ಗೆ ಮತ್ತು ಸಾಯಂಕಾಲ ತಲಾ 1 ಗಂಟೆ ವಾಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಆದರೆ ಆರೋಪಿ ಹೊರಗಡೆ ಹೋಗಬೇಕು, ಇದೇ ಬ್ಯಾರಕ್ನಲ್ಲಿಯೇ ಇರಬೇಕು ಎಂದರೆ ಆಗುವುದಿಲ್ಲ. ಅವರಿಗೆ ಬಿಸಿಲು ಬರುತ್ತಿಲ್ಲ ಎಂದರೆ ಜೈಲಾಧಿಕಾರಿಗಳು ಹೊಣೆಯಾಗಲು ಸಾಧ್ಯವಿಲ್ಲ. ಮೂಲಭೂತ ಹಕ್ಕು ಇರಬಹುದು. ಆದರೆ ಜೈಲಿನ ನಿಯಮಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ’ ಎಂದರು.
ಪ್ರತಿಯಾಗಿ ದರ್ಶನ್ ಪರ ವಾದ ಮಂಡಿಸಿದ ವಕೀಲ ಸುನೀಲ್ ಅವರು ಜೈಲಾಧಿಕಾರಿಗಳ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು. ಈ ಹಿಂದೆ ನ್ಯಾಯಾಲಯ ನೀಡಿರುವ ಸೂಚನೆಗಳನ್ನು ಗಾಳಿಗೆ ತೂರಲಾಗಿದೆ. ನ್ಯಾಯಾಲಯ ನೀಡಿದ್ದ ಸೂಚನೆಗಳು ಜೈಲಧಿಕಾರಿಗಳಿಗೆ ಅರ್ಥವಾದಂತಿಲ್ಲ, ಬಹುಶಃ ಅವರಗೆ ಇಂಗ್ಲಿಷ್ ಅರ್ಥವಾದಂತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ, ನ್ಯಾಯಾಲಯದ ಘನತೆಗೆ ತಕ್ಕಂತೆ ವಾದ ಮಂಡಿಸುವಂತೆ ನ್ಯಾಯಾಧೀಶರು ಸೂಚಿಸಿದರು. ಮುಂದುವರೆದು ವಾದ ಮಂಡಿಸಿದ ದರ್ಶನ್ ಪರ ವಕೀಲರು, ‘ಆರೋಪಿಗಾಗಿ ಚಿನ್ನದ ಮಂಚವನ್ನೇನೂ ಕೇಳಿಲ್ಲ, ಅವರ ಆರೋಗ್ಯದ ದೃಷ್ಟಿಯಿಂದ ಕೆಲವು ಸಾಮಾನ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಕೋರಲಾಗಿದೆ. ಯಾವ ಕೈದಿಗೆ ಯಾವ ಸೆಲ್ ನೀಡಬೇಕೆಂದು ಜೈಲಿನ ಕೈಪಿಡಿಯಲ್ಲಿದೆ. ಆದರೆ ಜೈಲಾಧಿಕಾರಿಗಳು ಆ ಮಾರ್ಗಸೂಚಿಗಳನ್ನೂ ಸಹ ಪಾಲಿಸುತ್ತಿಲ್ಲ. ದರ್ಶನ್ ಅವರಿಗಾಗಿಯೇ ಜೈಲಿನಲ್ಲಿ ಪ್ರತ್ಯೇಕ ರಿಜಿಸ್ಟಾರ್ ಇರಿಸಲಾಗಿದೆ. ಅತ್ಯಾಚಾರ ಪ್ರಕರಣದ ಆರೋಪಿಗೆ ನೀಡಿರುವಂತಹ ಸವಲತ್ತುಗಳನ್ನೂ ಸಹ ದರ್ಶನ್ ಅವರಿಗೆ ನೀಡಿಲ್ಲ. ಆರೋಪಿಯನ್ನು 14 ದಿನ ಮಾತ್ರ ಕ್ವಾರಂಟೈನ್ ಸೆಲ್ನಲ್ಲಿರಿಸಬೇಕು. ಆದರೆ 45 ದಿನಗಳಿಂದಲೂ ಕ್ವಾರಂಟೈನ್ ಸೆಲ್ನಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ. ಕ್ವಾರಂಟೈನ್ ಸೆಲ್ನಿಂದ ಬೇರೆ ಬ್ಯಾರಕ್ಗೆ ವರ್ಗಾಯಿಸಲಿ ಎನ್ನುವುದು ಸದ್ಯದ ನಮ್ಮ ಮನವಿ’ ಎಂದು ವಾದ ಮಂಡಿಸಿದರು.
Laxmi News 24×7