ಚಿಕ್ಕೋಡಿ (ಬೆಳಗಾವಿ) : ಹಿಂದುಳಿದ ಆಯೋಗ ನಡೆಸುವ ಜಾತಿ ಜನಗಣತಿಯಲ್ಲಿ ಪಂಚಮಸಾಲಿಗಳೆಂದು ನಮೂದಿಸಿ, ಕಾಲಂ ನಂಬರ್ 0868 ಎಂದು ಇರಲಿದೆ. ಅದರಲ್ಲಿ ಪಂಚಮಸಾಲಿ ಸಮಾಜವೆಂದು ಬರೆಸಿ ಎಂದು ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಲಿಂಗಾಯತ ಮಹಾಸಭಾ ಏನಾದರೂ ತೀರ್ಮಾನ ಮಾಡಲಿ, ಪಂಚಮಸಾಲಿಗಳು ಅದಕ್ಕೆ ಕಿವಿಗೊಡಬೇಡಿ, ಜಾತಿ ಜನಗಣತಿಯಲ್ಲಿ ನೀವು ಪಂಚಮಸಾಲಿಗಳೆಂದು ನಮೂದಿಸಿ ಎಂದಿದ್ದಾರೆ.
ಸಂವಿಧಾನ ಬದ್ಧವಾಗಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಶೈಕ್ಷಣಿಕವಾಗಿ ರಾಜ್ಯ ಸರ್ಕಾರದಿಂದ ಪ್ರವರ್ಗ 2ಎ ಮೀಸಲಾತಿ ಹಾಗೂ ಕೇಂದ್ರದಿಂದ ಓಬಿಸಿ ಮೀಸಲಾತಿ ನೀಡುವಂತೆ ಕಳೆದ ಐದು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ, ಕಳೆದ ಬಾರಿ ಡಿಸೆಂಬರ್ 10ರಂದು ಇವತ್ತಿನ ಸರ್ಕಾರ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿತು. ಆ ನೋವು, ಸಂಕಟ ನಮ್ಮೊಳಗಿದೆ. ಸರ್ಕಾರ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದರೂ, ಯಾವುದೇ ಸರ್ಕಾರ ಬಂದರೂ, ಯಾವುದೇ ಮುಖ್ಯಮಂತ್ರಿ ಬಂದರೂ ನಮ್ಮ ಹೋರಾಟ ಬಿಡಬಾರದು ಎಂದು ಹೇಳಿದ್ದಾರೆ.
ನಮ್ಮ ಮಕ್ಕಳ ಕೈಗೆ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟವನ್ನು ಕೈ ಬಿಡಬಾರದು ಎಂದು ಪ್ರಾಮಾಣಿಕವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇವತ್ತು ರಾಯಭಾಗ ತಾಲೂಕಿನಿಂದ ಎಂಟನೇ ಹಂತದ ಹೋರಾಟ ಪ್ರಾರಂಭಿಸಲಾಗಿದ್ದು, ಹೋರಾಟ ಸಮಿತಿಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೂಡಿ ಚರ್ಚಿಸಿ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದಿದ್ದಾರೆ.
ಹೋರಾಟದ ಆರಂಭವನ್ನು ಹಾರೋಗೇರಿಯಿಂದ ಪ್ರಾರಂಭಿಸಲಾಗುವುದು. 2028ನೆಯ ಇಸ್ವಿಗೆ ಒಂದು ನಿರ್ಧಾರಕ್ಕೆ ನಾವು ಬರಬೇಕಾಗಿದೆ. ಆ ನಿರ್ಧಾರಕ್ಕೆ ಇಡೀ ಸಮಾಜ ಒಗ್ಗಟ್ಟಾಗಿರಬೇಕು. ಪ್ರತಿ ತಾಲೂಕು, ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಜನರೊಂದಿಗೆ ಸಂವಾದ, ಸಂಘರ್ಷ ಮತ್ತು ಅಭಿಪ್ರಾಯ ಸಂಗ್ರಹ ಮಾಡಿಕೊಂಡು ಜನ ಏನು ತೀರ್ಮಾನ ಮಾಡುತ್ತಾರೆ ಆ ತೀರ್ಮಾನವನ್ನು ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಹೋರಾಟವನ್ನು ನಿರಂತರವಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Laxmi News 24×7