ಬೆಂಗಳೂರು: ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ ಇದೇ ತಿಂಗಳ 22ರಿಂದ ನಡೆಸಲಿರುವ ಜಾತಿ ಗಣತಿಗೂ ಮುನ್ನವೇ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಮಠಾಧೀಶರು ಹಾಗೂ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ. ಈ ಹಿನ್ನೆಲೆಯಲ್ಲಿ, ರಾಜ್ಯ ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಲಿಂಗಾಯತ ಸಮುದಾಯದೊಳಗಿನ ಬಿರುಕುಗಳು ಬಹಿರಂಗವಾಗಿವೆ.
ಪಂಚಮಸಾಲಿ ಲಿಂಗಾಯತ ಸ್ವಾಮೀಜಿಗಳ ಸಭೆ: ಬುಧವಾರ ಬೆಂಗಳೂರಿನಲ್ಲಿ ಹರಿಹರ ವೀರಶೈವ ಪಂಚಮಸಾಲಿ ಲಿಂಗಾಯತ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಕರೆದಿದ್ದ ಪಂಚಮಸಾಲಿ ಲಿಂಗಾಯತ ಮಠಗಳ ಸ್ವಾಮೀಜಿಗಳು ಮತ್ತು ನಾಯಕರ ಸಭೆಯಲ್ಲಿ, ಜಾತಿ ಸಮೀಕ್ಷೆಯಲ್ಲಿ ಸಮುದಾಯದ ಧರ್ಮವನ್ನು ವೀರಶೈವ ಲಿಂಗಾಯತ ಎಂದು ಉಲ್ಲೇಖಿಸದೆ, ಹಿಂದೂ ಎಂದು ಉಲ್ಲೇಖಿಸುವ ನಿರ್ಧಾರಕ್ಕೆ ಬರಲಾಗಿದೆ. ಇದು ರಾಜ್ಯದಲ್ಲಿ ಲಿಂಗಾಯತರ ಪ್ರತಿನಿಧಿ ಸಂಸ್ಥೆ ಎಂದು ಹೇಳಿಕೊಳ್ಳುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ಧಾರಕ್ಕೆ ವಿರುದ್ಧವಾಗಿದೆ. ಸಭೆಯಲ್ಲಿ ಕೆಲವರ ಅಸಮ್ಮತಿಯ ನಡುವೆಯೂ ಈ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಮಹಾಸಭಾವು, ಸಮೀಕ್ಷೆಯ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತರು ‘ಹಿಂದು’ ಎಂದು ಬರೆಸದಂತೆ ಸಮುದಾಯದ ಜನತೆಗೆ ಕರೆ ನೀಡಿತ್ತು.
ಹಿಂದು ಎಂದು ನಮೂದಿಸಲು ಮನವಿ: ಸಭೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ವಚನಾನಂದ ಸ್ವಾಮೀಜಿ, “ಲಿಂಗಾಯತರು ಹಿಂದೂಗಳು ಮತ್ತು ಹಿಂದೂಗಳು ಎಂದು ಘೋಷಿಸಿಕೊಂಡಿರುವುದರಿಂದಲೇ ಇಂದು ನಾವು ಹಲವು ಸರ್ಕಾರಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ, ನಮ್ಮ ಎಲ್ಲಾ ಸಮುದಾಯದ ಸದಸ್ಯರು ತಮ್ಮ ಧರ್ಮವನ್ನು ಹಿಂದು ಎಂದು ಮತ್ತು ಜಾತಿಯನ್ನು ಪಂಚಮಸಾಲಿ ಲಿಂಗಾಯತ ಎಂದು ನಮೂದಿಸಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.
ಹಿಂದುಗಳ ಸಂಖ್ಯೆ ಕಡಿಮೆ ಮಾಡುವ ಪಿತೂರಿ: ಲಿಂಗಾಯತ ಸಮುದಾಯವನ್ನು ದಾರಿ ತಪ್ಪಿಸುವ ಮೂಲಕ ಲಿಂಗಾಯತ ಸಮುದಾಯವನ್ನು ಧರ್ಮವೆಂದು ನಮೂದಿಸಲು ಮಹಾಸಭಾ ಕರೆ ನೀಡಿರುವುದನ್ನು ಅವರು ಟೀಕಿಸಿದರು. “ಹಿಂದುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಇಂತಹ ಕರೆಗಳ ಹಿಂದೆ ಪಿತೂರಿ ಇದೆ. ನಾವು ಅದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಲಿಂಗಾಯತ ಎಂಬ ಯಾವುದೇ ಧರ್ಮವಿಲ್ಲ. ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಗುರುತಿಸುವ ಬೇಡಿಕೆಯನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಹೀಗಿರುವಾಗ, ಲಿಂಗಾಯತವನ್ನು ನಮ್ಮ ಧರ್ಮವೆಂದು ಉಲ್ಲೇಖಿಸುವುದರಲ್ಲಿ ಅರ್ಥವಿಲ್ಲ” ಎಂದು ವಚನಾನಂದ ಸ್ವಾಮೀಜಿ ಹೇಳಿದರು.
Laxmi News 24×7