ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಮಂಗಳವಾರ ಸಂಜೆ ಮಾಸ್ಕ್ ಧರಿಸಿಕೊಂಡು ನುಗ್ಗಿದ್ದ ಕಳ್ಳರು, ಬೃಹತ್ ಪ್ರಮಾಣದ ಸ್ವತ್ತು ದರೋಡೆ ಮಾಡಿಕೊಂಡು ಪರಾರಿಯಾಗಿದ್ದು, ಪ್ರಕರಣ ಸಂಬಂಧಪಟ್ಟಂತೆ ದರೋಡೆಕೋರರ ಬಂಧನಕ್ಕೆ 8 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಎಸ್ಪಿ: ಬ್ಯಾಂಕ್ ದರೋಡೆ ಕುರಿತು ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ (ಸೋಮವಾರ) ಸಂಜೆ ನಡೆದ ದರೋಡೆ ಪೂರ್ವ ನಿಯೋಜಿತ. ದರೋಡೆ ಉದ್ದೇಶದಿಂದಲೇ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಖಾತೆ ತೆರೆಯಲೆಂದು ಓರ್ವ ವ್ಯಕ್ತಿ ಬಂದಿದ್ದು, ಸುಮಾರು 4:30ರಿಂದ ಬ್ಯಾಂಕ್ನಲ್ಲಿಯೇ ಕುಳಿತಿದ್ದ. ಇನ್ನೇನು ಬ್ಯಾಂಕ್ ಮುಚ್ಚುವ ಸಮಯವಾಗಿತ್ತು. ಅಲ್ಲದೇ, ಬ್ಯಾಂಕ್ ಸಿಬ್ಬಂದಿ ಕೂಡ ತೆರಳಬೇಕಿತ್ತು. ಅಷ್ಟರಲ್ಲೇ ಅಲ್ಲಿ ಕುಳಿತಿದ್ದ ವ್ಯಕ್ತಿ, ಹೊರಗಡೆಯಿಂದ ಮತ್ತಿಬ್ಬರನ್ನು ಕರೆಸಿಕೊಂಡಿದ್ದಾನೆ. ಎಲ್ಲರೂ ಸೇರುತ್ತಿದ್ದಂತೆ ಬ್ಯಾಂಕ್ನಲ್ಲಿದ್ದ 6 ಮಂದಿ ಸಿಬ್ಬಂದಿ ಹಾಗೂ 4 ಜನ ಗ್ರಾಹಕರನ್ನು ಪಿಸ್ತೂಲ್ನಿಂದ ಹೆದರಿಸಿ ಬ್ಯಾಂಡ್ನಿಂದ ಕೈ ಕಟ್ಟಿ ಒಂದು ರೂಮ್ನಲ್ಲಿ ಕೂಡಿ ಹಾಕಿ ಈ ದರೋಡೆ ನಡೆಸಿರುವುದು ಕಂಡು ಬಂದಿರುವುದಾಗಿ ತಿಳಿಸಿದರು.