ಬೆಂಗಳೂರು: ಹರ್ನಿಯಾ ಸಮಸ್ಯೆಯಿಂದ ಬಳುತ್ತಿರುವ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಮೇಲೆ ದಾಳಿ ಪ್ರಕರಣದ ಆರೋಪಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು 90 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ.
ಸರ್ಜರಿಗೆ ಒಳಗಾಗಲು ಮಧ್ಯಂತರ ಜಾಮೀನು ಕೋರಿ ನೀಡುವಂತೆ ಕೋರಿ ಕೆ.ಜಿ.ಹಳ್ಳಿಯ ಶ್ಯಾಂಪುರ ರಸ್ತೆ ನಿವಾಸಿ ಮೊಹಮ್ಮದ್ ಖಲೀಲ್ ಅಹ್ಮದ್ (19ನೇ ಆರೋಪಿ) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಎಸ್. ಮುದ್ಗಲ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರ ಆರೋಪಿ ಹರ್ನಿಯಾದಿಂದ ಬಳಲುತ್ತಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಸರ್ಜರಿಗೆ ಒಳಗಾಗಲು ಆತ ನಿರ್ಧರಿಸಿದ್ದಾನೆ. ಮಾ.8ರಂದು ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರ ತಂಡ ಅಗತ್ಯ ಸಿದ್ಧತೆ ನಡೆಸಿದ್ದರು. ಆದರೆ, ಜೈಲಿನಿಂದ ಎಸ್ಕಾರ್ಟ್ ನೀಡದ್ದಕ್ಕೆ ಶಸ್ತ್ರಚಿಕಿತ್ಸೆ ನಡೆಯಲಿಲ್ಲ. ಇದರಿಂದ ಅರ್ಜಿದಾರನಿಗೆ 71 ವರ್ಷವಾಗಿದೆ. ವೈದ್ಯಕೀಯ ವರದಿ ಮತ್ತು ವಯಸ್ಸು ಪರಿಗಣಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಲು ಅರ್ಜಿದಾರನಿಗೆ 90 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಲಾಗುತ್ತಿದೆ ಎಂದು ಪೀಠ ಹೇಳಿದೆ.
ಅರ್ಜಿದಾರನಿಗೆ ಷರತ್ತು ವಿಧಿಸಿದ ಕೋರ್ಟ್: ಅಲ್ಲದೆ, ಒಂದು ಲಕ್ಷ ರು. ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಮನೆ ವಿಳಾಸ ನೀಡಬೇಕು. ಬೆಂಗಳೂರು ಬಿಟ್ಟು ತೆರಳಬಾರದು. ಎರಡು ವಾರಕ್ಕೊಮ್ಮೆ ವೈದ್ಯಕೀಯ ವರದಿಯನ್ನು ಎನ್ಐಎ ತನಿಖಾಧಿಕಾರಿಗೆ ನೀಡಬೇಕು. ಜೈಲಿನಿಂದ ಬಿಡುಗಡೆಯಾದ ದಿನಾಂಕದಿಂದ ಸರಿಯಾಗಿ 91ನೇ ದಿನದಂದು ಅಧೀನ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂದು ಅರ್ಜಿದಾರನಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.
ಅಲ್ಲದೆ, ಅರ್ಜಿದಾರ ಉಗ್ರಗಾಮಿ ಸಿದ್ಧಾಂತ ಹೊಂದಿದ್ದು, ಭಯೋತ್ಪಾದಕ ಕೃತ್ಯ ಎಸಗುವ ಉದ್ದೇಶದಿಂದ ಪಿತೂರಿ ನಡೆಸಿದ್ದಾರೆ. ಅವಹೇಳನಕಾರಿ ಹೇಳಿಕೆ ನೀಡಿದ ಪಿ.ನವೀನ್ ಎಂಬಾತನ ವಿರುದ್ಧ ಕ್ರಮ ಜರುಗಿಸಬೇಕು. ಆತನನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಒತ್ತಾಯಿಸಿ 2020ರ ಆ.11ರಂದು ರಾತ್ರಿ 8.45 ಕ್ಕೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿ ಅರ್ಜಿದಾರ ಸೇರಿದಂತೆ ಇತರೆ ಜಮಾಯಿಸಿದ್ದರು. ನವೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದರೂ, ಪೊಲೀಸ್ ಠಾಣೆ ಧ್ವಂಸಗೊಳಿಸಿದ ಹಾಗೂ ಖಾಸಗಿ ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿಯಿಟ್ಟಿದ್ದರು. ಪೊಲೀಸರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂಬ ಆರೋಪ ಅರ್ಜಿದಾರನ ಮೇಲಿದೆ.
ಜೈಲಿನಲ್ಲಿರುವ ಆರೋಪಿ, ತನಗೆ 71 ವರ್ಷವಾಗಿದೆ. ಸದ್ಯ ತಾನು ಹರ್ನಿಯಾದಿಂದ ಬಳಲುತ್ತಿದ್ದೇನೆ. ಶಸ್ತ್ರಚಿಕಿತ್ಸೆಗೆ ಒಳಗಾಗಲು 60 ದಿನಗಳ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸರ್ಜರಿ ಮಾಡಿಸಲು ಯಾರೂ ಸಲಹೆ ನೀಡಿಲ್ಲ. ಅಗತ್ಯ ವೈದ್ಯಕೀಯ ನೆರವನ್ನು ಜೈಲಿನಲ್ಲಿ ನೀಡಲಾಗಿದೆ ಎಂಬ ಆಧಾರದಲ್ಲಿ ಆರೋಪಿಯ ಮನವಿಯನ್ನು ನಗರದ ಎನ್ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದರು.
Laxmi News 24×7