98ರ ಮಂಗಳೂರು ಕೋಮುಗಲಭೆ: 26 ವರ್ಷದ ಬಳಿಕ ಇಬ್ಬರ ಬಂಧನ
ಮಂಗಳೂರು(ದಕ್ಷಿಣ ಕನ್ನಡ): 1998ಲ್ಲಿ ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು 26 ವರ್ಷಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ಬಂಧಿತರು. ಲೀಲಾಧರ್ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದನು. ಚಂದ್ರಹಾಸ್ ಕೇಶವ ಶೆಟ್ಟಿ ದುಬೈನಿಂದ ಊರಿಗೆ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 30ರಂದು ಬಂಧಿಸಲಾಗಿದೆ.
31-12-1998ರಂದು ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ, ಬೆಂಕಿ ಹಚ್ಚಿ ನಡೆಸಿದ ಗಲಾಟೆ ಹಿನ್ನೆಲೆಯಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪೈಕಿ ಆರೋಪಿ ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ಘಟನೆ ನಡೆದಾಗಿನಿಂದ ಪೊಲೀಸರಿಗೆ ಸಿಗದೇ ಪರಾರಿಯಾಗಿದ್ದು, ಹಿಂದಿನ ತನಿಖಾಧಿಕಾರಿಗಳು ಇವರು ತಲೆಮರೆಸಿಕೊಂಡಿರುವ ಬಗ್ಗೆ ಉಲ್ಲೇಖಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮೂಡಬಿದ್ರೆಯ CJ & JMFC ನ್ಯಾಯಾಲಯ ಇದನ್ನುCC. No 665/2014, LPC No 10/2017 ಪ್ರಕರಣವೆಂದು ಘೋಷಿಸಿತ್ತು. ಲೀಲಾಧರ್ ಇತ್ತೀಚೆಗೆ ಸ್ವದೇಶಕ್ಕೆ ಬಂದು ಪಕ್ಷಿಕೆರೆ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾಗ ಬಂಧಿಸಲಾಗಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಅದೇ ರೀತಿ ಚಂದ್ರಹಾಸ್ ಕೇಶವ ಶೆಟ್ಟಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Laxmi News 24×7