ಚಾಮರಾಜನಗರ: ಲಾರಿ, ಕಾರು ಹಾಗೂ ಬೈಕ್ ನಡುವೆ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಬಾಲಕರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘನನೆಯಲ್ಲಿ ಚಾಮರಾಜನಗರದ ಕೆ.ಪಿ. ಮೊಹಲ್ಲಾದ ಮೆರಾನ್ (10) ಸ್ಥಳದಲ್ಲೇ ಮೃತಪಟ್ಟಿದ್ದ. ಚಿಂತಾಜನಕ ಸ್ಥಿತಿಯಲ್ಲಿದ್ದ ಮೆರಾನ್ನ ಅಣ್ಣ ಫೈಜಲ್ ಹಾಗೂ ರಿಯಾಸ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಇನ್ನೋರ್ವ ಬಾಲಕ ಅದಾನ್ ಪಾಷಾ ಎಂಬಾತನಿಗೆ ಚಿಕಿತ್ಸೆ ಮುಂದುವರೆದಿದೆ. ಘಟನೆಯಲ್ಲಿ, ಕಾರಿನ ಚಾಲಕ ಶ್ರೀಕಾಂತ್ (22) ಹಾಗೂ ಮಣಿಕಾಂತ್ (45) ಎಂಬ ಇಬ್ಬರಿಗೂ ಗಾಯಗಳಾಗಿದ್ದು, ಅವರಿಗೆ ಸಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ ಮಧ್ಯಾಹ್ನ ಬೈಕ್ನಲ್ಲಿ ನಾಲ್ವರು ಬಾಲಕರು ತೆರಳುತ್ತಿದ್ದಾಗ ಬೆಂಗಳೂರಿನಿಂದ ತಾಳವಾಡಿಗೆ ತೆರಳುತ್ತಿದ್ದ ಕಾರು ಗುದ್ದಿದ ಪರಿಣಾಮ, ಲಾರಿ ಕೆಳ ಭಾಗದಲ್ಲಿ ಬೈಕ್ ಸಿಲುಕಿ ಅಪಘಾತ ನಡೆದಿತ್ತು. ಕಾರಿನಲ್ಲಿದ್ದವರು ಸೊಲ್ಲಾಪುರದ ಮೂಲದವರಾಗಿದ್ದು, ಖಾಸಗಿ ಟ್ಯಾಕ್ಸಿ ಮೂಲಕ ತಮಿಳುನಾಡಿನ ತಾಳವಾಡಿಗೆ ತೆರಳುತ್ತಿದ್ದರು.
ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಚಾಮರಾಜನಗರ ಟ್ರಾಫಿಕ್ ಠಾಣೆ ಪೊಲೀಸರು ಮೂರು ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.
Laxmi News 24×7