ಬಳ್ಳಾರಿ : ಧರ್ಮಸ್ಥಳ ಪ್ರಕರಣವು, ರಾಜ್ಯ ಮಾತ್ರವಲ್ಲ ದೇಶದಲ್ಲಿ ಚರ್ಚೆಯಾಗಿರುವ ವಿಚಾರವಾಗಿದೆ. ಇದರ ಹಿಂದೆ ಎಡಪಂಥೀಯ ನಗರ ನಕ್ಸಲರು ಭಾಗಿಯಾಗಿದ್ದಾರೆ. ತಮಿಳುನಾಡು ಸಂಸದ ಸಸಿಕಾಂತ್ ಸೆಂಥಿಲ್ ಕೂಡ ಇದ್ದಾರೆ ಎಂಬ ತಮ್ಮ ಆರೋಪಕ್ಕೆ ತಾವು ಬದ್ಧ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಂಥಿಲ್ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅವರ ಹೆಸರು ಹೇಳಿದ್ದಕ್ಕೆ ಕೇಸ್ ಹಾಕಿದ್ದಾರೆ. ಇದಕ್ಕೆ ಕೋರ್ಟ್ನಲ್ಲೇ ಉತ್ತರ ಕೊಡುವೆ ಎಂದರು.
ಸೆಂಥಿಲ್ ಎಸ್ಐಟಿ ತನಿಖೆ ಎದುರಿಸಲಿ: ಧರ್ಮಸ್ಥಳ ಪ್ರಕರಣದಲ್ಲಿ ತಮಿಳುನಾಡು ಸಂಸದ ಭಾಗಿಯಾಗಿದ್ದಾನೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿ ಅವರನ್ನೂ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ವಿಚಾರಣೆ ನಡೆಸಬೇಕು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಕಷ್ಟವಾದ್ದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಎನ್ಐಎ ಅಥವಾ ಸಿಬಿಐ ಮೂಲಕ ಈ ಪ್ರಕರಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಕೇಸ್ ಹೊಸದೇನಲ್ಲ: ಸಂಸದ ಸಸಿಕಾಂತ್ ಸೆಂಥಿಲ್ ನನ್ನ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆ ನನಗೆ ಹೊಸದೇನಲ್ಲ. ಪತ್ರಿಕೆಯ ಎಡಿಟರ್ ಅಗಿದ್ದಾಗಿನಿಂದಲೂ ಬಳಿಕ ರಾಜಕೀಯಕ್ಕೆ ಬಂದ ಮೇಲೂ ಈ ರೀತಿಯ ಕೇಸ್ ಎದುರಿಸಿದ್ದೇನೆ. ಕಾಂಗ್ರೆಸ್ ಸಂಸದ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಸಿಎಂ ಭೇಟಿ ಮಾಡಿ ತಿಳಿಸಬೇಕಿತ್ತು. ಜೊತೆಗೆ ಸಿಬಿಐ ತನಿಖೆಗೆ ಕೋರಬೇಕಿತ್ತು ಎಂದರು.
ರಾಹುಲ್ ಗಾಂಧಿ ಕೂಡ ಬೇಲ್ ಮೇಲಿದ್ದಾರೆ: ಸಸಿಕಾಂತ್ ಸೆಂಥಿಲ್ ನನ್ನ ಮೇಲೆ ರಾಜ್ಯ ಲೂಟಿ ಮಾಡಿರುವ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕೂಡ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೊಡ್ಡ ವಂಚನೆ ಮಾಡಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗಿದ್ದಾರೆ ಎಂಬುದನ್ನು ಸೆಂಥಿಲ್ ಮರೆಯಬಾರದು ಎಂದು ಕುಟುಕಿದರು.
ಧರ್ಮಸ್ಥಳ ಪ್ರಕರಣದಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ. ಎಡಪಂಥೀಯ ನಗರ ನಕ್ಸಲರು ಭಾಗಿಯಾಗಿದ್ದಾರೆ ಎಂದು ಹೇಳಿದ್ದೆ. ಅದಕ್ಕೆ ಬದ್ಧನಾಗಿದ್ದೇನೆ. ಬಳ್ಳಾರಿ ಮೂಲದ ಯೂಟ್ಯೂಬರ್ ಸಮೀರ್ ಸೌಜನ್ಯ ಪ್ರಕರಣ ಬಗ್ಗೆ ವಿಡಿಯೋ ಮಾಡಿ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿದ್ದಾನೆ. ಮುಸುಕುದಾರಿ ಚಿನ್ನಯ್ಯ ಸೇರಿದಂತೆ ಇತರರು ಅಪಪ್ರಚಾರ ಮಾಡಿದರು. ಇದೀಗ, ಷಡ್ಯಂತ್ರ ಹೊರಗೆ ಬಂದಿದೆ ಎಂದರು.
ದೇಶದ ಆಚೆಗೂ ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆಸಿದ ಆರೋಪವಿದೆ. ವಿದೇಶಿ ಉಗ್ರವಾದ ಸಂಸ್ಥೆ ಇದೆಯೇ ಎಂಬ ಬಗ್ಗೆ ತನಿಖೆಯಾಗಬೇಕು. ತಿರುಪತಿ, ಶಬರಿಮಲೆ ಬಳಿಕ ಈಗ ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಿದರೆ ತನ್ನ ಆರೋಪಗಳಿಗೆ ಸೂಕ್ತ ದಾಖಲೆ ಕೊಡುವೆ ಎಂದು ತಿಳಿಸಿದರು.
Laxmi News 24×7