ಹಾವೇರಿ: ಭಾರಿ ಮಳೆಯಿಂದ ಜಿಲ್ಲೆಯ ಹಲವೆಡೆ ಬೆಳೆಗಳೆಲ್ಲ ರೋಗಕ್ಕೆ ತುತ್ತಾಗಿದ್ದು, ಬೇಸತ್ತ ರೈತನೋರ್ವ ಹತ್ತಿ ಬೆಳೆಯನ್ನು ಟ್ರ್ಯಾಕ್ಟರ್ ರೂಟರ್ ಹೊಡೆದು ನಾಶ ಮಾಡಿದ್ದಾರೆ.![]()
ಈ ವರುಷ ಉತ್ತಮ ಮುಂಗಾರು ಪೂರ್ವ ಮಳೆ ಆಗಿರುವ ಹಿನ್ನೆಲೆಯಲ್ಲಿ, ರೈತರು ಹೆಚ್ಚಿನ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಬೆಳೆಗಳು ನಾಶವಾಗಿವೆ.
ಗೋವಿನಜೋಳ, ಹತ್ತಿ, ಸೋಯಾಬಿನ್, ಶೇಂಗಾ ಬೆಳೆಗಳಿಗೆ ಹಲವು ರೋಗಗಳು ಕಾಣಿಸಿಕೊಂಡಿವೆ. ಕೆಂಪುರೋಗ, ಬೂದಿರೋಗ ಸೇರಿದಂತೆ ಹಲವು ರೋಗಗಳಿಂದ ಬೆಳೆಗಳು ಪ್ರಗತಿ ಕಾಣದೆ, ಮುಳ್ಳುಸಜ್ಜಿ ಕಳೆ ಕಾಟವೂ ಸಹ ರೈತರನ್ನು ಹೈರಾಣಾಗಿಸಿತು.ಟ್ರ್ಯಾಕ್ಟರ್ ಮೂಲಕ ಹತ್ತಿ ನಾಶ: ಬಿತ್ತನೆ ಮಾಡುವಾಗ ಮಳೆ, ಗೊಬ್ಬರ ಹಾಕುವಾಗ ಮಳೆ, ಕ್ರೀಮಿನಾಶಕ ಸಿಂಪಡಣೆ ಮಾಡುವಾಗ ಮಳೆ, ಕಳೆ ಕೀಳಲು ಮಳೆ. ಹೀಗೆ, ನಿರಂತರ ಮಳೆಯಿಂದ ರೈತರು ಹೊಲದಲ್ಲಿ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಣಾಮ ಹತ್ತಿ ಬೆಳೆಗೆ ಸಮರ್ಪಕ ಗೊಬ್ಬರ ನೀಡಲಾಗಲಿಲ್ಲ.
ಅಲ್ಲದೆ, ಕಳೆ ತೆಗೆಯಲೂ ಸಾಧ್ಯವಾಗಲಿಲ್ಲ. ಹೀಗಾಗಿ, ಹತ್ತಿ ಬೆಳೆ ಸರಿಯಾಗಿ ಬರಲಿಲ್ಲ. ಇದರಿಂದ ಬೇಸತ್ತ ಹಾವೇರಿ ತಾಲೂಕು ಆಲದಕಟ್ಟಿಯ ರೈತ ಬಸವರಾಜ್ ಮಿರ್ಜಿ ಎಂಬವರು ತಮ್ಮ ಹತ್ತಿ ಬೆಳೆಯನ್ನು ಟ್ರ್ಯಾಕ್ಟರ್ ಹೊಡೆದು ನಾಶ ಮಾಡಿದ್ದಾರೆ.
Laxmi News 24×7