ದಾವಣಗೆರೆ : ಗಣೇಶ ಹಬ್ಬ ಬಂತು ಎಂದರೆ ಸಾಕು ತರಹೇವಾರಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಿ ವಿಘ್ನ ನಿವಾರಕ, ವಿಘ್ನ ವಿನಾಶಕನಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ದಾವಣಗೆರೆ ಹಿಂದೂ ಯುವ ಶಕ್ತಿ ವೇದಿಕೆ, ಕಳೆದ 33 ವರ್ಷಗಳಿಂದ ಪೂಜಾ ಸಾಮಗ್ರಿಗಳನ್ನ ಬಳಸಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದೆ. ಈ ಬಾರಿ ಸ್ವಲ್ಪ ಬದಲಾವಣೆಯಂತೆ ಹಿಂದೂ ಯುವ ಶಕ್ತಿ ವೇದಿಕೆಯಿಂದ ಯುವಕರು ವಿಶೇಷವಾಗಿ ಗೋವಿನ ಗೆಜ್ಜೆ ಬಳಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಗೋವಿನ ಗೆಜ್ಜೆಗಳಿಂದ ಸಿದ್ಧವಾಗಿರುವ ವಿಘ್ನೇಶ್ವರನನ್ನು ಕಣ್ತುಂಬಿಕೊಳ್ಳಲು ಭಕ್ತರು ತಂಡೋಪತಂಡವಾಗಿ ಬರುತ್ತಿದ್ದಾರೆ.
ದಾವಣಗೆರೆಯ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪನೆ : ನಗರದ ಎಂಸಿಸಿಎ ಬ್ಲಾಕ್ನಲ್ಲಿರುವ ತೊಗಟವೀರ ಸಮುದಾಯ ಭವನದಲ್ಲಿ ಕಳೆದ 33 ವರ್ಷಗಳಿಂದ ಹಿಂದೂ ಯುವ ಶಕ್ತಿ ವೇದಿಕೆಯಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಒಟ್ಟು ಮೂರುವರೆ ಕ್ವಿಂಟಾಲ್ ಗೆಜ್ಜೆಯಿಂದ ಹದಿಮೂರುವರೆ ಅಡಿ ಎತ್ತರದ ಗಣೇಶ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 9,555 ಗೆಜ್ಜೆಗಳನ್ನು ಬಳಸಿಕೊಂಡು ನಿರ್ಮಾಣ ಮಾಡಿರುವ ಗಣೇಶ ಮೂರ್ತಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಇದನ್ನು ನೋಡಲು ಭಕ್ತರು ತಂಡೋಪತಂಡವಾಗಿ ತೊಗಟಿವೀರ ಕಲ್ಯಾಣ ಮಂಟಪಕ್ಕೆ ಆಗಮಿಸುತ್ತಿದ್ದಾರೆ. ಗೆಜ್ಜೆ ಗಣೇಶನ ಮುಂದೆ ಸೆಲ್ಫಿಗೆ ಫೋಸ್ ಕೊಡುತ್ತಿದ್ದಾರೆ.ಒಂದೊಂದು ವಸ್ತುಗಳನ್ನು ಬಳಸಿಕೊಂಡು ಗಣೇಶ ಮೂರ್ತಿ ನಿರ್ಮಾಣ : ಪ್ರತಿಬಾರಿಯೂ ಒಂದೊಂದು ವಸ್ತುಗಳನ್ನು ಬಳಸಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಗಣಪತಿಯ ಪೂಜಾ ಸಾಮಾಗ್ರಿಗಳನ್ನು ಬಳಸಿ ಗಣೇಶ ಮೂರ್ತಿ ಸ್ಥಾಪಿಸಲಾಗುತ್ತದೆ. ತೆಂಗಿನಕಾಯಿ, ಹಸಿ ಅಡಕೆ, ಮೆಕ್ಕೆಜೋಳದ ತೆನೆ, ಕಡ್ಲೆಕಾಳು, ಉತ್ತುತ್ತಿ, ಬಾದಾಮಿ, ಡೈಮಂಡ್, ಒಂದು ರೂಪಾಯಿ ನಾಣ್ಯ, ರೇಷ್ಮೆಗೂಡು, ರುದ್ರಾಕ್ಷಿ, ಏಲಕ್ಕಿ, ಬೆಟ್ಟಅಡಿಕೆ, ಮುತ್ತಿನಮಣಿ, ಕವಡೆ, ಮೋದಕ, ಸಣ್ಣಸಣ್ಣ ಗಣಪತಿಮೂರ್ತಿಗಳು, ಗೋಡಂಬಿ, ಅರಿಶಿಣಕೊಂಬು, ಕಡಲೆಕಾಯಿ, ಬೆಳ್ಳಿಗಣಪತಿ ಮೂರ್ತಿಗಳು, ಐದು ರೂಪಾಯಿನಾಣ್ಯಗಳು, ಇಷ್ಟಲಿಂಗಗಳಿಂದ, ನವಿಲುಗರಿಗಳಿಂದ, ಒಣಕೊಬ್ಬರಿಯಿಂದ, ಗೋಪಿಚಂದನದಿಂದ ಗಣೇಶ ಮೂರ್ತಿಗಳನ್ನು ಸಿದ್ದಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಮೂರುವರೆ ಕ್ವಿಂಟಾಲ್, ಗೋವಿನ ಗೆಜ್ಜೆಗಳನ್ನು ಬಳಸಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ.
Laxmi News 24×7