ರಾಯಚೂರು: ಅಪಾಯದ ಮಟ್ಟವನ್ನೂ ಮೀರಿ ಉಕ್ಕಿ ಹರಿಯುತ್ತಿದ್ದ ಹಳ್ಳವನ್ನು ದಾಟಿ ಗ್ರಾಮಸ್ಥರು ಶವಸಂಸ್ಕಾರ ಮಾಡಿರುವ ಘಟನೆ ಜಿಲ್ಲೆಯ ಗೋಮರ್ಸಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದಲ್ಲಿ ವೀರೇಶ ತೆಲುಗರ ಎನ್ನುವ ವ್ಯಕ್ತಿ ಮೃತಪಟ್ಟಿದ್ದರು. ಶನಿವಾರ ಶವಸಂಸ್ಕಾರ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಆದರೆ, ಶವಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೇ, ಸ್ಮಶಾನಕ್ಕೆ ಹಳ್ಳ ದಾಟಿ ಹೋಗಬೇಕಿದ್ದರಿಂದ ಗ್ರಾಮದ ಜನರು ಸೇರಿದಂತೆ ಸಂಬಂಧಿಕರು ಪರದಾಡುವಂತಾಯಿತು.
ಅನಿವಾರ್ಯವಾಗಿ ತುಂಬಿ ಹರಿಯುತ್ತಿರುವ ಹಳ್ಳದ ನೀರಿನಲ್ಲಿಯೇ ಶವಹೊತ್ತು ಅಂತ್ಯಸಂಸ್ಕಾರ ನೆರವೇರಿಸಿದರು. ಕಳೆದ ಅನೇಕ ವರ್ಷಗಳ ಹಿಂದೆ ಹಳ್ಳದ ಕೆಳಭಾಗದಲ್ಲಿ ಸರ್ವೆ ನಂ.146, 147 ಭೂಮಿಯನ್ನು ಸ್ಮಶಾನದ ಉದ್ದೇಶಕ್ಕಾಗಿ ಗುರುತಿಸಲಾಗಿತ್ತು. ಈ ಭೂಮಿಗೆ ಶವಸಂಸ್ಕಾರ ತೆರಳಬೇಕಾದರೆ ಹಳ್ಳ ದಾಟಲೇ ಬೇಕಾದ ಪರಿಸ್ಥಿತಿ ಇದೆ. ಗ್ರಾಮದ ಹತ್ತಿರ ಸೂಕ್ತ ಜಾಗವನ್ನು ಸ್ಮಶಾನಕ್ಕೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಕೊಚ್ಚಿ ಹೋಗಿದ್ದ ಶವ: ಈ ಹಿಂದೆ ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇವರ ಅಂತ್ಯಸಂಸ್ಕಾರಕ್ಕೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಶವವನ್ನು ಹೊತ್ತು ಸಾಗುತ್ತಿದ್ದಾಗ ನೀರಿನ ಪ್ರಮಾಣ ಹೆಚ್ಚಾಗಿ ಶವವೇ ಹಳ್ಳದಲ್ಲಿ ಕೊಚ್ಚಿ ಹೋಗಿತ್ತು. ಬಳಿಕ ನಂತರ ಸಂಬಂಧಿಕರು, ಗ್ರಾಮದ ಮುಖಂಡರು ಶವಕ್ಕಾಗಿ ಶೋಧ ನಡೆಸಿದ್ದರು. ಶವ ಸಿಕ್ಕಬಳಿಕ ಅಂತ್ಯಕ್ರಿಯೆ ಮಾಡಿದ್ದರು.
Laxmi News 24×7